ಉತ್ತರಪ್ರದೇಶದಲ್ಲಿ ಒಬ್ಬ ದಲಿತ ಬಾಲಕನನ್ನು ಶಿಕ್ಷಕ ಅಮಾನವೀಯವಾಗಿ ಹಿಂಸಿಸಿದ್ದು ವರದಿಯಾಗಿದೆ (ಪ್ರ.ವಾ., ಸೆ. 8). ಇಂತಹ ಪ್ರಕರಣಗಳು ಆಗಾಗ್ಗೆ ನಡೆಯುತ್ತಿದ್ದರೂ ಇದರ ಬಗ್ಗೆ ಯಾರೂ ಗಂಭೀರವಾಗಿ ಚಿಂತನೆ ನಡೆಸಿದಂತೆ ಕಾಣುತ್ತಿಲ್ಲ. ಇದಕ್ಕೆ ಕಾರಣರಾದ ಆರೋಪಿಗಳಿಗೆ ಶಿಕ್ಷೆ ಆಗುತ್ತಿದೆಯೋ ಅಥವಾ ಅವರು ಬಚಾವಾಗಿ ಹೊರಬರುತ್ತಿದ್ದಾರೋ ಎಂಬ ಸತ್ಯ ಎಲ್ಲೂ ಬಹಿರಂಗವಾಗುತ್ತಿಲ್ಲ. ಹೀಗಾಗಿ ದಲಿತರ ಸುರಕ್ಷತೆಯ ಪ್ರಶ್ನೆ ಮುನ್ನೆಲೆಗೆ ಬರುವುದು ಸಹಜ. ಮತಾಂತರವನ್ನು ವಿರೋಧಿಸುತ್ತಿರುವ ನಾವು, ಹಿಂದೂ ಧರ್ಮದಲ್ಲಿ ದಲಿತರಿಗೆ ರಕ್ಷಣೆ ಕೊಡಬೇಕಾದ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಮತಾಂತರವನ್ನು ವಿರೋಧಿಸುವ ನೈತಿಕ ಹಕ್ಕು ನಮಗೆ ಬರುವುದು ಹೇಗೆ ಸಾಧ್ಯ?!