ತೊಂಬತ್ತೈದು ವರ್ಷದ ಅಜ್ಜಿಯ ಜತೆ ಒಂದು ವಾರ ಕಳೆಯಲೆಂದು ಮಲೆನಾಡಿನ ಹಳ್ಳಿಗೆ- ಸಾಗರ ತಾಲ್ಲೂಕು ತಾಳಗುಪ್ಪ ಹೋಬಳಿ ತಡಗಳಲೆ ಗ್ರಾಮಕ್ಕೆ ತೆರಳಿದ್ದ ಮಗಳು, ಅಲ್ಲಿ ಲಭ್ಯವಿದ್ದ ಇಂಟರ್ನೆಟ್ ಕೈಕೊಟ್ಟ ಕಾರಣ ‘ಮನೆಯಿಂದ ಕೆಲಸ’ಕ್ಕೆ ತೊಡಕುಂಟಾಗಿ, ತುರ್ತಾಗಿ ಬೆಂಗಳೂರಿಗೆ ಹಿಂತಿರುಗಲು ತಾಳಗುಪ್ಪದಿಂದ ರೈಲಿಗೆ ಸೀಟು ಕಾದಿರಿಸಿದ್ದಳು. ಅದೂ ಶುಕ್ರವಾರ ಸಂಜೆ 6 ಗಂಟೆಗೆ, ಪಯಣಿಗರ ಪಟ್ಟಿ (ಪ್ಯಾಸೆಂಜರ್ಸ್ ಚಾರ್ಟ್) ಸಿದ್ಧವಾದ ನಂತರ ತತ್ಕಾಲ್ ಸೀಟು ಕಾದಿರಿಸಿದಳು. ರಾತ್ರಿ 8.20ಕ್ಕೆ ತಾಳಗುಪ್ಪದಿಂದ ಹೊರಡುವ ರೈಲಿಗಾಗಿ 7.20ಕ್ಕೆ ವಾಹನದಲ್ಲಿ ಹೋಗುತ್ತಿರುವಾಗ, ಮಾರ್ಗಮಧ್ಯೆ ಫೋನಿನಲ್ಲಿ ಬಂದ ಎಸ್ಎಂಎಸ್ ಸಂದೇಶದ ಮೂಲಕ ‘ಅನಿವಾರ್ಯ ಕಾರಣಗಳಿಂದ ಇಂದಿನ ತಾಳಗುಪ್ಪ– ಬೆಂಗಳೂರು ರೈಲು ರದ್ದಾಗಿದೆ’ ಎಂದು ತಿಳಿಸಲಾಯಿತು.