‘ದೇಶ ಒಡೆಯುವ ರಾಜಕೀಯ ಕುತಂತ್ರ, ಷಡ್ಯಂತ್ರದ ಭಾಗವಾಗಿ ಹಿಂದಿಯನ್ನು ವಿರೋಧಿಸಲಾಗುತ್ತಿದೆ. ಹಿಂದಿ ರಾಷ್ಟ್ರಭಾಷೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ವೈ.ಎ.ನಾರಾಯಣ ಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ (ಪ್ರ.ವಾ., ಸೆ. 27). ಅವರ ಈ ಮಾತುಅರ್ಥಹೀನವಾದುದು. ಭಾರತವು ಹಲವು ರಾಜ್ಯಗಳ ಒಕ್ಕೂಟ. ಸಂವಿಧಾನದಲ್ಲಿ ಇದನ್ನು ಗಣರಾಜ್ಯ ಎಂದು ಕರೆಯಲಾಗಿದೆ. ಅಂದರೆ ಭಾರತ ಎನ್ನುವುದು ಒಂದು ದೇಶವಾದರೂ ಇಲ್ಲಿರುವುದು ಒಂದೇ ಭಾಷೆ, ಒಂದೇ ಮತ, ಒಂದೇ ಸಂಸ್ಕೃತಿ, ಒಂದೇ ರೀತಿಯ ಉಡುಗೆ- ತೊಡುಗೆ, ಒಂದೇ ಆಹಾರ ಪದ್ಧತಿ ಅಲ್ಲ. ವೈವಿಧ್ಯವೇ ಇದರ ಪ್ರಧಾನ ಲಕ್ಷಣ. ಈ ವೈವಿಧ್ಯ ಇದ್ದೂ ಏಕತೆಯನ್ನು ಸಾಧಿಸಿದೆ. ಇದೇ ಇದರ ವಿಶೇಷ. ಇದನ್ನು ನಾವು ಉಳಿಸಿ, ಬೆಳೆಸಬೇಕು. ಈ ವೈವಿಧ್ಯವನ್ನು ಸವರಿಬಿಟ್ಟು ಏಕತೆಯನ್ನು ತರಲು ಪ್ರಯತ್ನಿಸುತ್ತಿರುವವರೇ ಸಾವಿರಾರು ವರ್ಷಗಳ ಈ ಅಪರೂಪದ ಪರಂಪರೆಯನ್ನು ನಾಶ ಮಾಡುತ್ತಿರುವವರು!