ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸ ಮರಳು ನೀತಿಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ. ಕೆಲವು ಕಡೆ ಮರಳು ಕ್ವಾರಿಗಳಿಗೆ ಸರ್ಕಾರ ಅನುಮತಿ ನೀಡಿದ್ದರಿಂದ, ಮರಳು ಬೇಕಾಬಿಟ್ಟಿ ಹೊರಗಡೆ ಸಾಗಣೆ
ಯಾಗುತ್ತಿತ್ತು. ದಂಧೆಯ ಸ್ವರೂಪ ಪಡೆದುಕೊಂಡಿತ್ತು. ಸರ್ಕಾರದಿಂದ ವಸತಿ ಯೋಜನೆಯಡಿ ಮನೆ ಪಡೆದುಕೊಂಡ ಬಡವರಿಗೆ ದುಬಾರಿ ಹಣ ಕೊಟ್ಟು ಸ್ಥಳೀಯವಾಗಿ ಮರಳು ಪಡೆಯುವುದು ಕಷ್ಟಸಾಧ್ಯವಾಗಿತ್ತು. ಬಡವರ ಕಷ್ಟ ಹೇಳತೀರದಾಗಿತ್ತು. ಸರ್ಕಾರಕ್ಕೆ ಬರುವ ರಾಯಧನದಲ್ಲಿ ಅರ್ಧ ಭಾಗವನ್ನು ಗ್ರಾಮ ಪಂಚಾಯಿತಿಗೆ ನೀಡುವುದು, ಬಡವರಿಗೆ ರಿಯಾಯಿತಿ ದರದಲ್ಲಿ ಮರಳು ನೀಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗೇ ನೀಡಿರುವುದು, ದ್ವಿಚಕ್ರ ವಾಹನ, ಎತ್ತಿನ ಗಾಡಿ ಮುಂತಾದವುಗಳ ಮೇಲೆ ಮರಳು ಕೊಂಡೊಯ್ಯುವ ರೈತರು ಮತ್ತು ಬಡವರಿಗೆ ರಾಯಧನದಿಂದ ರಿಯಾಯಿತಿ ನೀಡುವಂಥ ನಿರ್ಧಾರಗಳು ನಿಜಕ್ಕೂ ಉತ್ತಮವಾದವು.