ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅದರ ಚುನಾವಣೆಯ ಬಗ್ಗೆ ಡಾ. ಆರ್.ಲಕ್ಷ್ಮೀನಾರಾಯಣ ಅವರು ಪ್ರಸ್ತಾಪಿಸಿ ದ್ದಾರೆ (ಪ್ರ.ವಾ., ನ. 1). ಹಿಂದೆಲ್ಲಾ ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷ ಗಾದಿಗೆ ಅಭ್ಯರ್ಥಿಗಳನ್ನು ಬಲವಂತವಾಗಿ ಎಳೆದುಕೊಂಡು ಬಂದು ಕೂರಿಸಬೇಕಿತ್ತು. ಆದರೆ, ಬರಬರುತ್ತಾ ಸಮ್ಮೇಳನಕ್ಕೆ ಸರ್ಕಾರದಿಂದ ಕೋಟಿಗಟ್ಟಲೆ ಹಣ ಬರುತ್ತಿರುವ ಕಾರಣಕ್ಕೋ ಅಥವಾ ಇನ್ನಾವ ಕಾರಣಕ್ಕೋ ಆ ಸ್ಥಾನಗಳಿಗೆ ಭರ್ಜರಿಯಾಗಿ ಚುನಾವಣೆಗಳು ನಡೆಯುವಂಥ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕೆ ಸರಿಯಾಗಿ ಅಧ್ಯಕ್ಷರ ಅವಧಿ ಮೂರು ವರ್ಷಗಳಿಗೆ ಬದಲಾಗಿ ಐದು ವರ್ಷ ಆದದ್ದು ಕೂಡ ಪರಿಷತ್ತು ರಾಜಕೀಯ ಸಂಸ್ಥೆಯ ರೂಪ ಪಡೆಯಲು ಸಹಕಾರಿಯಾಯಿತೇನೋ ಎಂಬ ಆತಂಕ ಹಲವರಲ್ಲಿದೆ.