ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ರಾಜ್ಯದ ಕಾರಾಗೃಹಗಳಿಗೆ ಸಾರ್ವಜನಿಕರು ಭೇಟಿ ನೀಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಕೊರೊನಾ ಸೋಂಕಿನ ಕಾರಣದಿಂದ ವಿಚಾರಣಾಧೀನ ಮತ್ತು ಸಜಾ ಬಂದಿಗಳನ್ನು ಭೇಟಿಯಾಗುವುದಕ್ಕೆ ಅವರ ಕುಟುಂಬ ಮತ್ತು ಸ್ನೇಹಿತರಿಗೆ ತಡೆಯೊಡ್ಡಲಾಯಿತು. ಅಂದಿನಿಂದ ಇಂದಿನವರೆಗೂ ಬಂದಿಗಳು ತಮ್ಮ ಸಮೀಪದ ಬಂಧುಗಳು, ಮಕ್ಕಳು ಮರಿಗಳನ್ನು ನೋಡಲಾಗದಂತಹ ಸ್ಥಿತಿ ಇದೆ. ಅಂತಹ ಕಠಿಣವಾದ ನಿರ್ಬಂಧ ಹೇರಲಾಗಿದೆ. ವಾರಕ್ಕೊಮ್ಮೆ ಸಿಗುವ ದೂರವಾಣಿ ಸಂಪರ್ಕದಿಂದ ಮೂರ್ನಾಲ್ಕು ನಿಮಿಷ ಅವರು ಮಾತನಾಡಬಹುದಾಗಿದೆ. ಕಡೇಪಕ್ಷ ಕರ್ನಾಟಕದ ಜೈಲುಗಳಲ್ಲಿ ಲಭ್ಯವಿರುವ ವಿಡಿಯೊ ಕಾನ್ಫರೆನ್ಸ್ ಸೌಲಭ್ಯವನ್ನು ಬಳಸಿ ಸಮೀಪದ ಬಂಧುಗಳೊಂದಿಗೆ ಮಾತನಾಡುವ ವ್ಯವಸ್ಥೆಯನ್ನಾದರೂ ಕಲ್ಪಿಸಬಹುದಾಗಿತ್ತು.