ಲಾಕ್ಡೌನ್ ಸಡಿಲಿಕೆಯಾದ ತರುವಾಯ ಸಾರ್ವಜನಿಕರು ಸ್ವಚ್ಛಂದವಾಗಿ ಸಂಚರಿಸುತ್ತಿರುವುದರಿಂದ ಇದುವರೆಗೂ ಹಸಿರು ವಲಯಗಳಾಗಿದ್ದ ಜಿಲ್ಲೆಗಳು ಕೆಂಪು ವಲಯಗಳಾಗಿ ಮಾರ್ಪಡುತ್ತಿವೆ. ಇದು ಎಚ್ಚರಿಕೆಯ ಸಂದೇಶವಾಗಿದೆ. ನಿಯಮಗಳನ್ನು ಪಾಲಿಸುವುದೆಂದರೆ ನಮ್ಮನ್ನು ನಾವು ರಕ್ಷಿಸಿಕೊಂಡಂತೆ ಎಂಬುದನ್ನು ಅರಿಯಬೇಕಾಗಿದೆ. ಈ ಸಂದರ್ಭದಲ್ಲಿ, ನಾವು ಚಿಕ್ಕವರಿದ್ದಾಗ ಆಡುತ್ತಿದ್ದ ಆಟ ನೆನಪಾಗುತ್ತದೆ. ‘ಕಾಡೇ ಗೂಡೇ, ಉದ್ದಿನ ಮೂಟೆ ಉರುಳೇ ಹೋಯಿತು. ನಮ್ಮಯ ಹಕ್ಕಿಯ ಬಿಟ್ಟೇಬಿಟ್ಟೆವು, ನಿಮ್ಮಯ ಹಕ್ಕಿಯ ಬಚ್ಚಿಟ್ಟುಕೊಳ್ಳಿರಿ’ ಎಂಬ ಸಾಲಿನಂತೆ, ಲಾಕ್ಡೌನ್ ನಿಯಮಗಳು ಸಡಿಲವಾದ ನಂತರ, ಸಾರ್ವಜನಿಕರು ಆರೋಗ್ಯ ಎಂಬ ತಮ್ಮಯ ಹಕ್ಕಿಯನ್ನು ಸೋಂಕಿನಿಂದ ಬಚ್ಚಿಟ್ಟುಕೊಳ್ಳಬೇಕಾದರೆ, ತಮಗೆ ತಾವೇ ಕೊರೊನಾ ವಾರಿಯರ್ಸ್ ಆಗಬೇಕಾಗಿದೆ.