‘ಹೀಗೂ ಸಾಧ್ಯ ಪರಿವರ್ತನೆ!’ ಎಂಬ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಲೇಖನ (ಸಂಗತ, ಮಾರ್ಚ್ 9) ಸಮಾಜದ ನೈತಿಕ ದುಃಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ತಳಸಮುದಾಯಗಳು ತಲೆಮಾರುಗಳಿಂದ ತಮ್ಮ ಗಳಿಕೆ, ಸಂಪತ್ತು, ಜ್ಞಾನ, ಶ್ರಮ, ಮಾನ, ಪ್ರಾಣ ಎಲ್ಲವನ್ನೂ ಆ ದೇವರಿಗಾಗಿ ಇಲ್ಲವೇ ತಮ್ಮವರನ್ನು ಹೊರತು ಇತರರಿಗೆ ಬಿಟ್ಟುಕೊಟ್ಟಿದ್ದಾರೆ. ಇದರಿಂದಾಗಿಯೇ ರಿಕ್ತ ಹಸ್ತದವರಾಗಿದ್ದಾರೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ವಂಚಿತರಾಗಿದ್ದಾರೆ. ಅದೇನೇ ಇರಲಿ, ಮಹಾರಾಷ್ಟ್ರದ ಪೆಡ್ಡ ಎಂಬ ಗ್ರಾಮದ ಜನರು ಮನಃಪರಿವರ್ತನೆ ಮಾಡಿಕೊಂಡು, ಅಸ್ಪೃಶ್ಯರೆನಿಸಿಕೊಂಡಿದ್ದ ಸಮಾಜದವರಿಗೆ ಸಿದ್ಧೇಶ್ವರ ದೇವಳದ ಮುಕ್ತ ಪ್ರವೇಶಕ್ಕೆ ಅವಕಾಶ ಕೊಟ್ಟಿರುವುದು ಅನುಕರಣೀಯ. ಆದರೆ ಈ ಅವಕಾಶ ದೊರೆತದ್ದು, ಅದೇ ಹಳ್ಳಿಯವರಾಗಿ ಈಗ ಮುಂಬೈನಲ್ಲಿ ಬೃಹತ್ ಉದ್ಯಮಿಯಾಗಿರುವ ತಳಸಮುದಾಯದ ಪ್ರಕಾಶ ಖಾಡೆ ಎಂಬ ಉದ್ಯಮಿ ಒಂದು ಕೋಟಿ ರೂಪಾಯಿಯನ್ನು ದೇವಾಲಯದ ಜೀರ್ಣೋದ್ಧಾರಕ್ಕಾಗಿ ದಾನ ನೀಡಿದ ಕಾರಣದಿಂದ.