ಖಾಸಗಿ ಕೈಗಾರಿಕೆಗಳಲ್ಲಿ ಸಿದ್ಧವಾಗುತ್ತಿರುವ ಸರುಕುಗಳನ್ನು ನಾವೆಲ್ಲರೂ ಉಪಯೋಗಿಸುತ್ತಿದ್ದೇವೆ. ಹೀಗಿದ್ದರೂ ಅಲ್ಲಿನ ಕಾರ್ಮಿಕರಿಗೆ ಉದ್ಯೋಗ ಸುರಕ್ಷತೆ ಇಲ್ಲದಿರುವುದು ವಿಷಾದನೀಯ. ಇತ್ತೀಚೆಗೆ ಎರಡು ದಿನಗಳ ಮುಷ್ಕರಕ್ಕೆ ದೇಶದಾದ್ಯಂತ ಕರೆ ಕೊಟ್ಟರೂ ಎಷ್ಟೋ ಕೈಗಾರಿಕೆಗಳು ಆ ದಿನಗಳಲ್ಲಿ ಕೆಲಸನಿರ್ವಹಿಸಿರುವುದು ಕಾರ್ಮಿಕರ ಅಸಹಾಯಕತೆಯನ್ನು ಬಿಂಬಿಸುತ್ತದೆ. ಖಾಸಗಿ ವಲಯದ ಕಾರ್ಮಿಕರಿಗೆ ನೀಡುವ ವೇತನವು ಜೀವನ ನಿರ್ವಹಣೆಗೆ ಸಾಲದಾಗಿದೆ. ಮಹಿಳಾ-ಪುರುಷರ ವೇತನದಲ್ಲಿ ತಾರತಮ್ಯ ನಡೆಯುತ್ತಲೇ ಇದೆ. ಕೆಲವು ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಸುಸಜ್ಜಿತ ಶೌಚಾಲಯ ಸೌಲಭ್ಯ, ಕುಡಿಯುವ ನೀರಿನ ಘಟಕ, ಪ್ರಥಮ ಚಿಕಿತ್ಸಾ ಘಟಕಗಳಿಲ್ಲ. ಕಾರ್ಮಿಕರು ದೇಶದ ಆತ್ಮವಿದ್ದಂತೆ. ಅವರಿಗೆ ಸಾಮಾಜಿಕ ಭದ್ರತೆಯಿಲ್ಲದೆ ಈ ದೇಶದ ಅಭಿವೃದ್ಧಿ ಆಗದು.