‘ಕನ್ನಡ ಮನಸ್ಸುಗಳ ಜೋಡಣೆ ಯಾರ ಹೊಣೆ’ ಎಂಬ ಬರಹದಲ್ಲಿ ರಘುನಾಥ ಚ.ಹ. ಅತ್ಯಂತ ಪ್ರಸ್ತುತವಾದ ಮತ್ತು ಸಕಾಲಿಕವಾದ ಪ್ರಶ್ನೆಯೊಂದನ್ನು ಎತ್ತಿದ್ದಾರೆ ಮತ್ತು ಅದರಲ್ಲಿ ಅವರು ಪ್ರಸ್ತಾಪಿಸಿರುವ ಹಲವು ವಿಚಾರಗಳು ವಾಸ್ತವವಾಗಿವೆ. ಈಚಿನ ವರ್ಷಗಳಲ್ಲಿ ಬರಹಗಾರರಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಗುಂಪುಗಳಾಗಿರುವುದಷ್ಟೇಅಲ್ಲ, ಆ ಗುಂಪುಗಳು ಕೆಲವೊಮ್ಮೆ ಸಂವಾದ ನಡೆಸಲಾರದಷ್ಟು ವಿಂಗಡವಾಗಿಬಿಟ್ಟಿವೆಯೇನೋ ಎಂದು ಆತಂಕಪಡುವಂತೆ ಆಗಿರುವುದೂ ಸುಳ್ಳಲ್ಲ. ಇದಕ್ಕೆ ಜಾತಿ, ಸಿದ್ಧಾಂತ ಮತ್ತು ಪಕ್ಷ ರಾಜಕಾರಣಗಳತ್ತ ಅತಿಯಾದ ಒಲವು ತೋರುತ್ತ ಬಂದಿರುವ ಬರಹಗಾರರೇ ಕಾರಣರೆಂಬುದಕ್ಕೆ ಹೆಚ್ಚಿನ ಸಂಶೋಧನೆಯೇನೂ ಅಗತ್ಯವಿಲ್ಲ ಮತ್ತು ಅವರುಗಳೇ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಈಗ ಬಂದಿದೆ ಎನಿಸುತ್ತದೆ.