‘ನೆಹರೂ ಅವರು ರಾಕ್ಷಸ ಪ್ರವೃತ್ತಿಯ ಮೂರ್ಖ’ ಎಂದು ಎ. ಸೂರ್ಯಪ್ರಕಾಶ್ ಅವರು ನ್ಯಾಯಾಧೀಶರಂತೆ ತೀರ್ಪು ಕೊಟ್ಟಿದ್ದಾರೆ. (ಪ್ರ.ವಾ., ಜುಲೈ 19 ). ಮುಸ್ಲಿಂ ಕೋಡ್ ಬಿಲ್ಗೆ ಮುಸ್ಲಿಂ ಮೂಲಭೂತವಾದಿಗಳ ವಿರೋಧವಿತ್ತು. ಹಿಂದೂ ಕೋಡ್ ಬಿಲ್ ಬಗ್ಗೆಯೂ ಹಿಂದೂ ಮೂಲಭೂತವಾದಿಗಳ ವಿರೋಧವಿತ್ತು. ಅದು ‘ಪಾಶ್ಚಾತ್ಯರನ್ನು ಅನುಕರಿಸುವಂತಹದ್ದು’, ‘ವಿದ್ರೋಹಾತ್ಮಕ’, ‘ಸಮಾಜಕ್ಕೆ ಕಂಟಕ’, ‘ನಾಶಮಾಡುವ ದುಷ್ಟ ಪ್ರಯತ್ನ’ ಎಂಬಂತಹ ಟೀಕೆಗಳು ವ್ಯಕ್ತವಾಗಿದ್ದವು. ಹಿಂದೂ ಕೋಡ್ ಬಿಲ್ ವಿರೋಧಿಸಿ ನೀಡಲಾಗಿದ್ದ ಕಾರಣಗಳು ಇವು:
1. ಸ್ತ್ರೀ-ಪುರುಷರಿಗೆ ಸಮಾನಾಧಿಕಾರ ಕೊಟ್ಟರೆ, ‘ಪಾಶ್ಚಾತ್ಯರ ಮನೆಯಂಗಳದಲ್ಲಿದ್ದಂತೆ ಅಶಾಂತಿಯಾಗುವುದು’
2. ಆಸ್ತಿಯಲ್ಲಿ ಮಗನಂತೆ ಮಗಳಿಗೂ ಸಮಪಾಲು ಕೊಟ್ಟರೆ ಕಚ್ಚಾಟ, ಜಗಳ ಹೆಚ್ಚಾಗುವುದು 3. ವಿಚ್ಛೇದನಕ್ಕೆ ಅವಕಾಶ ಕೊಟ್ಟರೆ ಹಿಂದೂ ಸ್ತ್ರೀಯರಿಗೆ ಹೆಚ್ಚಿನ ಕಷ್ಟವಾದೀತು
4. ಮರು ವಿವಾಹ, ಸ್ವೇಚ್ಛಾ ವಿವಾಹ, ಸಗೋತ್ರ ವಿವಾಹ, ಅಪವರ್ಣ ವಿವಾಹ, ವಿವಾಹ ವಿಚ್ಛೇದನಗಳೂ ತುಂಬಾ ಅಪಾಯಕಾರಿಯಾದವುಗಳು.
ಹಿಂದೂ ಕೋಡ್ ಬಿಲ್ಗೆ ಕಡೆಗೂ ಸಂಸತ್ ಒಪ್ಪಿಗೆ ಕೊಟ್ಟಿತು. ಇದನ್ನು ವಿರೋಧಿಸಿದವರಲ್ಲಿ ಮದನ ಮೋಹನ ಮಾಳವಿಯ, ಡಾ. ಕೈಲಾಸನಾಥ ಖಟ್ಜೂರವರೂ ಇದ್ದರು. (ಆಧಾರ: ಹಿಂದೂ ಕೋಡ್ ಬಿಲ್ ಏಕೆ?– ವೈ ಹಿಂದೂ ಕೋಡ್ ಬಿಲ್ ಈಸ್ ಡಿಟೆಸ್ಟಬಲ್’- ಕಾಸರಗೋಡು, ಅಲಹಾಬಾದ್).
ನೆಹರೂ ಅವರು ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನಿಟ್ಟದ್ದರು. ಮುಸ್ಲಿಂ ಮಹಿಳೆಯರಿಗೂ ಹಕ್ಕು ಸಿಗಬೇಕೆಂಬ ಅಭಿಪ್ರಾಯವನ್ನು ಅವರು ಹೊಂದಿದ್ದರೂ, ಮುಸ್ಲಿಂ ಸಮುದಾಯದ ಮೇಲೆ ‘ಹೇರಲು’ ಒಪ್ಪಲೇ ಇಲ್ಲ. ಮುಸಲ್ಮಾನರ ವೈಯಕ್ತಿಕ ಕಾನೂನನ್ನು ನಿರ್ಧರಿಸಬೇಕಾದವರು ಮುಸ್ಲಿಮರೇ ಎಂದು ಸಂಪೂರ್ಣವಾಗಿ ನಂಬಿದ್ದರು.
ನೆಹರೂ ಮೂರ್ಖರೇ ಆಗಿದ್ದಲ್ಲಿ ಅವರು 17 ವರ್ಷ ಸತತವಾಗಿ ಚುನಾವಣೆಯಲ್ಲಿ ಜಯಭೇರಿ ಸಾಧಿಸಿ ಆಡಳಿತ ನಡೆಸುವುದಕ್ಕಾಗುತ್ತಿತ್ತೇ ?
ಪ್ರಜಾತಂತ್ರದಲ್ಲಿ ಅಪಾರ ವಿಶ್ವಾಸವಿಟ್ಟಿದ್ದ ಪ್ರಧಾನಿ ನೆಹರೂ ಸರ್ವಾಧಿಕಾರಿಯಂತೆ ಆಡಳಿತ ನಡೆಸಲಿಲ್ಲ. ಇದನ್ನು ಅರಿಯದೇ, 17 ವರ್ಷಗಳ ಕಾಲ ಜನರಿಂದ ಗೌರವ, ಪ್ರೀತಿ ವಿಶ್ವಾಸವನ್ನು ಪಡೆದಿದ್ದ ‘ಮುತ್ಸದ್ದಿ ನೆಹರೂ’ ಅವರನ್ನು ‘ಮೂರ್ಖ’ , ‘ರಾಕ್ಷಸ’ ಎಂದು ಮೂದಲಿಸುವುದು ಎಷ್ಟರ ಮಟ್ಟಿಗೆ ಸರಿ?
ಕೊನೆಯದಾಗಿ, ಗುಜರಾತಿನ ಹಿಂದೂ ಮಹಿಳೆ ‘ಜಶೋದಾ ಬೆನ್’ ಅವರಿಗೆ ಯಾವ ಕಾನೂನು ಅನ್ವಯಿಸುತ್ತದೆ ತಿಳಿಸುವಿರಾ ಸೂರ್ಯಪ್ರಕಾಶ್ ಜೀ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.