ಸಾಹಿತ್ಯ ಕ್ಷೇತ್ರದೊಳಗೆ ರಾಜಕೀಯ ಬೆರೆತುಹೋಗಿ ಬಹಳ ಕಾಲವಾಯಿತು. ಆದರೆ ಅದು ವೈಯಕ್ತಿಕ ಧೋರಣೆಗಳಿಂದ ತುಂಬಿಕೊಳ್ಳುತ್ತಿದೆ ಎನ್ನುವುದಾದರೆ, ಕನ್ನಡ, ಸಾಹಿತ್ಯ, ಸಂಸ್ಕೃತಿ, ಈ ನೆಲ, ಭಾಷೆ ಎಲ್ಲವೂ ತೋರಿಕೆಮಯವಾಗುತ್ತವೆ. ಯಾರನ್ನೋ ಮೆಚ್ಚಿಸಲು, ಮತ್ಯಾವುದೋ ವ್ಯವಸ್ಥೆಯನ್ನು ವಿಜೃಂಭಿಸಲು ಅವುಗಳನ್ನು ಬಳಸಿದಂತೆ ಆಗುತ್ತದೆ. ರಾಜಕೀಯವು ಹೊಲಸಾಗಿರುವುದಂತೂ ಸತ್ಯ. ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತೂ ಇಂತಹ ಅಸಂಗತ ಕರಿನೆರಳನ್ನು ಹೊದ್ದುಕೊಂಡು ಉಸಿರಾಡಬೇಕಾಗಿರುವುದು ವಿಪರ್ಯಾಸವಲ್ಲದೆ ಮತ್ತೇನು?