ಅಕ್ಟೋಬರ್ 15 ಅನ್ನು ರೈತ ಮಹಿಳಾ ದಿನವಾಗಿ ಆಚರಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ಕೃಷಿ ದುಡಿಮೆ ಮತ್ತು ಡೇರಿ ಕೆಲಸಗಳಲ್ಲಿ ಮಹಿಳೆಯರ ಪಾಲೇ ಹೆಚ್ಚಿಗೆ ಇರುತ್ತದೆ. ಆದರೆ ಈಗಲೂ ಕೃಷಿ ಸೊತ್ತಿನ ಸ್ವಾಮಿತ್ವದಲ್ಲಿ ಮಹಿಳೆಯರ ಹೆಸರನ್ನು ಸೇರಿಸುವ ವ್ಯವಸ್ಥೆ ಇಲ್ಲ. ಹೆಸರು ಇಲ್ಲದಿದ್ದರೆ ಮಹಿಳೆಯರಿಗೆ ಎಷ್ಟೊಂದು ಬಗೆಯ ಸರ್ಕಾರಿ ನೆರವನ್ನು ಪಡೆಯಲು ಅಥವಾ ನ್ಯಾಯದ ಕಟ್ಟೆಗಳಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಅಡೆತಡೆಗಳು ಎದುರಾಗುತ್ತವೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಈಗ ವಿತರಿಸಲಾಗುತ್ತಿರುವ ‘ಸ್ವಾಮಿತ್ವ’ ಕಾರ್ಡಿನಲ್ಲಿ ಪುರುಷನ ಹೆಸರಿನ ಜೊತೆಗೇ ಆತನ ಪತ್ನಿಯ ಹೆಸರನ್ನೂ ಸೇರಿಸಬೇಕು. ಮಹಿಳಾ ರೈತರ ಈ ಬೇಡಿಕೆಗೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳೂ ಸ್ಪಂದಿಸುವಂತೆ ನಾವೆಲ್ಲ ಹಕ್ಕೊತ್ತಾಯ ಮಾಡಬೇಕಾಗಿದೆ. ‘ನಮ್ಮೂರ ಭೂಮಿ ನಮಗಿರಲಿ’ ಆಂದೋಲನವು ಭೂಮಿ ಕಳೆದುಕೊಂಡವರ ಮತ್ತು ತುಂಡು ಭೂಮಿಗಾಗಿ ದೀರ್ಘಕಾಲದಿಂದ ಹೋರಾಟ ಮಾಡುತ್ತಿರುವವರ ಸಂಕಷ್ಟಗಳ ಅಹವಾಲುಗಳನ್ನು ಇತ್ತೀಚೆಗೆ ನಡೆಸಿದ ಜನತಾ ಅದಾಲತ್ನಲ್ಲಿ ನಮ್ಮ ಮುಂದೆ ಇರಿಸಿತ್ತು. ಅಲ್ಲಿ ಅನೇಕ ಮಹಿಳೆಯರು ಕುಟುಂಬದ ಕೃಷಿ ಭೂಮಿ ತಮ್ಮ ಕೈಬಿಟ್ಟು ಹೋಗದೇ ಇರಬೇಕಾದರೆ ಅದರ ಹಕ್ಕುಪತ್ರ ಪತಿ-ಪತ್ನಿ ಇಬ್ಬರ ಹೆಸರಿಗೂ ಇರಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದರು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳಬೇಕು.
- ನಾಗಮೋಹನ ದಾಸ್, ಅ.ನಾ.ಯಲ್ಲಪ್ಪರೆಡ್ಡಿ, ಪ್ರೊ. ಎಂ.ಕೆ.ರಮೇಶ್, ನಾಗೇಶ ಹೆಗಡೆ, ಪ್ರೊ. ಎ.ಆರ್.ವಾಸವಿ, ರೇಣುಕಾ ವಿಶ್ವನಾಥ್, ವಿ.ಗಾಯತ್ರಿ