ಸಾವಿರಾರು ವರ್ಷಗಳಿಂದ ಪ್ರಬಲರ ಸ್ವಾರ್ಥ, ದಬ್ಬಾಳಿಕೆಗೆ ಒಳಗಾಗಿ ಎಲ್ಲಾ ರೀತಿಯ ಸೌಲಭ್ಯ, ಅವಕಾಶಗಳಿಂದ ವಂಚಿತವಾದ ಅನೇಕ ಸಮುದಾಯಗಳು ಜಾತಿ ಕಾರಣಕ್ಕೇ ಶೋಷಣೆಗೆ ಗುರಿಯಾಗಿ ದುರ್ಬಲರು, ಹಿಂದುಳಿದವರಾಗಿರುವುದು ವಾಸ್ತವ ಸಂಗತಿ. ಈ ಶೋಷಣೆಯಿಂದಾಗಿಯೇ ಅನೇಕ ಜಾತಿ, ಸಮುದಾಯಗಳು ಇಂದೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಾದುದರಿಂದಲೇ ಇವರನ್ನು ಮೇಲೆತ್ತಿ ಮುಖ್ಯವಾಹಿನಿಗೆ ತರಲು, ಅಧ್ಯಯನದಿಂದ ಕೂಡಿದ ತಾತ್ವಿಕ ಹಾಗೂ ವೈಜ್ಞಾನಿಕ ಕಾರಣಗಳ ಆಧಾರದಲ್ಲಿ ಕೆಲವು ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ. ಈ ನಿಗಮಗಳ ಸ್ಥಾಪನೆಗೆ ಬಡತನವೊಂದೇ ಮಾನದಂಡವಲ್ಲ. ಎಲ್ಲಾ ಬಡಜನರ ಕಲ್ಯಾಣವಾಗಬೇಕಾದುದು ಅವಶ್ಯಕ. ಆದರೆ ಇದನ್ನು ಸಾಧಿಸಲು ಸರ್ಕಾರದ ಬಳಿ ಬೇರೆಯೇ ಆದ ಅನೇಕ ಕಾರ್ಯಕ್ರಮಗಳಿವೆ. ಇವುಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವುದರ ಬಗ್ಗೆ ಕಾಳಜಿ ತೋರಲಿ.