ಸರ್ಕಾರಿ ಮಾಧ್ಯಮಕ್ಕೂ ಸಾಹಿತ್ಯ ಸಂಘಟನೆಗೂ ವ್ಯತ್ಯಾಸ ಇದೆ. ವ್ಯಕ್ತಿತ್ವದ ಛಾಪು, ಹಿಂಬಾಲಕರನ್ನು ಬೆಳೆಸಿಕೊಳ್ಳುವುದು, ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದು, ಭಿನ್ನಾಭಿಪ್ರಾಯ ಇರುವವರನ್ನು ಹತ್ತಿಕ್ಕುವುದು- ಇವು ಪರಿಷತ್ತಿಗೆ ಕಂಟಕ. ನಿವೃತ್ತ ಅಧಿಕಾರಿಗಳಿಗೆ ಸರ್ಕಾರದೊಡನೆ ವ್ಯವಹರಿಸುವುದು ಸುಲಭ- ನಿಜ. ಆದರೆ ಪ್ರತಿಯೊಂದಕ್ಕೂ ಸರ್ಕಾರದ ವಿವಿಧ ಏಜೆನ್ಸಿಗಳ ನೆರವಿನ ಮೇಲೇ ಅವಲಂಬಿತವಾಗುವ ಪ್ರವೃತ್ತಿ ನಿಲ್ಲಬೇಕು. ಮಹತ್ವದ ಕೆಲಸಗಳಲ್ಲಾದರೂ ಕಳಪೆತನ ಹೋಗಬೇಕು (ಉದಾಹರಣೆಗೆ, ಸಂಕ್ಷಿಪ್ತ ಕನ್ನಡ ನಿಘಂಟಿನ ಹನ್ನೊಂದನೆಯ ಮುದ್ರಣ– 2018 ಬೆಲೆ ಕಡಿಮೆ, ಆದರೆ ಕಾಗದದ ಗುಣಮಟ್ಟ ಹಾಗೂ ಬೈಂಡಿಂಗ್ ಸರಿ ಇಲ್ಲ). ಜಿಲ್ಲಾ ಘಟಕಗಳಲ್ಲಿ ಸಾಹಿತಿ ವೇಷದ ಮರಿ ರಾಜಕಾರಣಿಗಳೇ ಹೆಚ್ಚು ಪ್ರಭಾವ ಹೊಂದಿರುತ್ತಾರೆ. ಚಿಕ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಬಲ್ಲವರನ್ನು ಪ್ರೋತ್ಸಾಹಿಸಬೇಕಾಗಿದೆ. ಒಟ್ಟಿನಲ್ಲಿ ಕಸಾಪ ಕಟ್ಟಡದ ಮರುನಿರ್ಮಾಣ ಅಷ್ಟೇ ಸಾಲದು, ಕಾಯಕಲ್ಪ ಕಾಲದ ಕರೆ.