‘ದಲಿತ’ ಪದವನ್ನು ಬಳಸದಂತೆ ಬಹಳ ವರ್ಷಗಳ ಹಿಂದೆಯೇ ನಿರ್ದೇಶಿಸಬೇಕಿತ್ತು. ಇಷ್ಟು ಕಾಲ ಬಳಕೆ ಮಾಡಿದ್ದೇ ತಪ್ಪು. ಈಗಲಾದರೂ ಅದನ್ನು ಕೈಬಿಡುವ ತೀರ್ಮಾನಕ್ಕೆ ಬಂದಿರುವುದು ಸೂಕ್ತವಾದುದು. ದಲಿತ ಪದವು ಶೋಷಣೆ, ತುಳಿತಕ್ಕೊಳಗಾದ, ದಮನಕ್ಕೊಳಗಾದ, ವಂಚಿತ ಎಂಬ ಅರ್ಥವನ್ನು ನೀಡುತ್ತದೆ. ಇದು ಪರಿಶಿಷ್ಟ ಜಾತಿಯ ಜನರಿಗೆ ತೀವ್ರ ಮುಜುಗರ ಉಂಟು ಮಾಡುತ್ತಿತ್ತು. ಅದೇ ರೀತಿ ‘ಗಿರಿಜನ’ ಎಂದರೆ ಬೆಟ್ಟಗಳು, ಗುಡ್ಡಗಳು ಮತ್ತು ಪರ್ವತಗಳಲ್ಲಿ ವಾಸಿಸುವ ಜನ ಎಂದು ತಕ್ಷಣ ಎಲ್ಲರಿಗೂ ಮನವರಿಕೆ ಆಗುತ್ತಿತ್ತು. ಇದರಿಂದ ಆ ಸಮುದಾಯದವರು ಇರುಸುಮುರುಸು ಅನುಭವಿಸುತ್ತಿದ್ದರು. ಪ್ರಸ್ತುತ ಈ ಪದಗಳ ಬಳಕೆ ಕೈ ಬಿಟ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದು ಏಕವರ್ಗ ಸೂಚಕವಾಗಿ ಬಳಸಬೇಕೆಂದು ನಿರ್ದೇಶನ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ.