ಈ ಪ್ರಕರಣಗಳಲ್ಲಿ ನಾವು ಕಲಿಯಬೇಕಾದ ಕೆಲವು ಪಾಠಗಳಿವೆ. ಎಲ್ಲ ಶಿಕ್ಷಕರಿಗೆ ಕನಿಷ್ಠ ಎರಡು ವರ್ಷಗಳಿಗೆ ಒಮ್ಮೆಯಾದರೂ ಮೌಲ್ಯಗಳ ಪುನರ್ಮನನ ಕಾರ್ಯಾಗಾರ ಆಗಬೇಕು. ಮಕ್ಕಳನ್ನು ಹಿಂಸಿಸುವವರಿಗೆ ಮಕ್ಕಳ ಹಕ್ಕುಗಳ ಪರಿಚಯ ಇರುವಂತೆ ನೋಡಿಕೊಳ್ಳಬೇಕು. ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಪೋಷಕರ ಸಹಭಾಗಿತ್ವ ಮತ್ತು ಪಾಲ್ಗೊಳ್ಳುವಿಕೆಯನ್ನು ಕಡ್ಡಾಯ ಮಾಡಬೇಕು. ಇದರಲ್ಲಿ ಶಿಕ್ಷಕರ ಸಂಘಟನೆಗಳ ಪಾತ್ರ ಬಹಳ ಮಹತ್ವದ್ದು. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳೂ ಪಾಲ್ಗೊಳ್ಳುವಂತೆ ಮಾಡಬೇಕು. ನಮ್ಮ ಪ್ರಾಥಮಿಕ ಶಿಕ್ಷಣದ ಬಗೆಗೆ ಸಮಗ್ರ ಚಿಂತನೆ ನಡೆಸಬೇಕು. ಇದರಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಳ್ಳಬೇಕು. ಆಗ ಸ್ವಲ್ಪಮಟ್ಟಿಗಿನ ಸುಧಾರಣೆ ಆಗಿ, ಇಂತಹ ಅವಘಡಗಳು ತಪ್ಪಬಹುದೇನೊ.