ಕನ್ನಡದಲ್ಲಿ ಇತ್ತೀಚೆಗೆ ಸದಭಿರುಚಿಯ ಚಲನಚಿತ್ರಗಳು ಬರುತ್ತಿರುವುದು ಆಶಾದಾಯಕವಾದ ಬೆಳವಣಿಗೆ. ರಂಗಭೂಮಿಯ ಹಿನ್ನೆಲೆಯಿಂದ ಬಂದವರು, ವಿದ್ಯಾರ್ಥಿಗಳು, ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಪ್ರಯೋಗಾತ್ಮಕವಾದ, ಸದಭಿರುಚಿಯ ಕಲಾತ್ಮಕ ಚಿತ್ರಗಳನ್ನು ನಿರ್ಮಿಸುತ್ತಿದ್ದು, ಅನ್ಯರು ಕನ್ನಡ ಚಿತ್ರರಂಗದತ್ತ ನೋಡುವಂತಾಗಿದೆ. ಇತ್ತೀಚೆಗೆ ತೆರೆಕಂಡ ‘ಸೂಜಿದಾರ’ ಸದಭಿರುಚಿಯ ಕಲಾಸಕ್ತರನ್ನು ಸೆಳೆಯುವಂಥದ್ದು. ರಂಗಭೂಮಿಯಿಂದ ಬಂದಿರುವ ಯುವ ನಿರ್ದೇಶಕ ಮೌನೇಶ್ ಬಡಿಗೇರರು ಚಿತ್ರದಲ್ಲಿ ಸಮಕಾಲೀನ ಸಂಗತಿಗಳನ್ನು ಕಥನದ ವಸ್ತುವನ್ನಾಗಿ ತೆಗೆದುಕೊಂಡು ನಿರ್ವಹಿಸಿರುವ ರೀತಿ ಪ್ರಶಂಸಾರ್ಹ. ಲವ್ ಜಿಹಾದ್, ಮತಾಂಧತೆಯಂಥ ವಸ್ತುಗಳನ್ನು ತೆಗೆದುಕೊಂಡು ಎಲ್ಲಿಯೂ ಸಂಘರ್ಷಕ್ಕೆ ಎಡೆಮಾಡಿಕೊಡದೆ, ಜನರ ಮೈ ಮನವನ್ನು ಮಾನವೀಯ ನೆಲೆಯಲ್ಲಿ ಸೃಜನಾತ್ಮಕವಾಗಿ ಪೋಣಿಸಿರುವುದು ಅಭಿನಂದನೀಯ.