ರಾಜಕೀಯ ನಾಯಕರು ಇತ್ತೀಚಿಗೆ ಬಹಿರಂಗ ಸಭೆ– ಸಮಾರಂಭಗಳಲ್ಲಿ ಎದುರಾಳಿಗಳನ್ನು ಜೋಡೆತ್ತು, ಕುಂಟೆತ್ತು, ಮುದಿಯೆತ್ತು, ಎರಡು ಹಲ್ಲಿನ ಕರ, ಎಮ್ಮೆಗಳು, ಟಗರು ಎಂದೆಲ್ಲಾ ಜರಿಯುತ್ತಿರುವುದು ಸಾಮಾನ್ಯವಾಗಿದೆ. ದಶಕಗಳಿಂದ ರಾಜಕಾರಣ ಮಾಡುತ್ತಾ ಸಾರ್ವಜನಿಕ ಜೀವನದಲ್ಲಿರುವವರು ಕೂಡ ಎಗ್ಗಿಲ್ಲದೆ ಇಂತಹ ಭಾಷಾ ಪ್ರಯೋಗ ಮಾಡುವುದನ್ನು ಕಂಡು ವಿಷಾದವೆನಿಸುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಗೌರವ, ವ್ಯಕ್ತಿತ್ವ ಇರುತ್ತದೆ. ಅದನ್ನು ಗೌರವಿಸಬೇಕಾದುದು ಪ್ರತೀ ನಾಗರಿಕನ ಕರ್ತವ್ಯ. ತೋಚಿದ್ದನ್ನು, ಬಾಯಿಗೆ ಬಂದದ್ದನ್ನು ಸಾರ್ವಜನಿಕವಾಗಿ ಮಾತನಾಡಿ ಮನುಷ್ಯ ಹಗುರವಾಗಬಾರದು.