ಸ್ಥಳೀಯರು ಹತ್ತಾರು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುವುದರಿಂದ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿರುತ್ತಾರೆ. ಅದರಿಂದಾಗಿ ಸುಲಭವಾಗಿ ಪ್ರಶಸ್ತಿ ಪಡೆಯಲು ಇವರಿಗೆ ಸಾಧ್ಯವಾಗುತ್ತದೆ. ಅಂತಹವುಗಳಿಗೆ ಅವಕಾಶ ತುಂಡರಿಸುವ ರೀತಿ ಮಾನದಂಡಗಳನ್ನು ಬಿಗಿಗೊಳಿಸಬೇಕು. ಅರ್ಹ ಶಿಕ್ಷಕರು ಅವಕಾಶ ವಂಚಿತರಾಗದಂತೆ ನೋಡಿಕೊಳ್ಳಬೇಕು. ಸಾಮಾನ್ಯವಾಗಿ ಎಲೆ ಮರೆ ಕಾಯಿಯಂತೆ ಎಲ್ಲೋ ಒಂದು ಕಡೆ ತನ್ನ ಕರ್ತವ್ಯ ಮಾಡುತ್ತಾ ಮಕ್ಕಳ ಏಳಿಗೆಗಾಗಿ ಹಂಬಲಿಸುವ ಹೃದಯವಂತ ಶಿಕ್ಷಕರು ಪ್ರಶಸ್ತಿಗಾಗಿ ಹಂಬಲಿಸುವುದಿಲ್ಲ. ಅರ್ಜಿ ಹಾಕಿ ಪ್ರಶಸ್ತಿ ಪಡೆಯಲು ಮುಂದಾಗುವುದಿಲ್ಲ. ಅಂತಹವರನ್ನು ಗುರುತಿಸುವ ಕೆಲಸ ಆಗಬೇಕು. ಇಲಾಖೆ ನೀಡುವ ಪ್ರಶಸ್ತಿಯ ಮೌಲ್ಯ ಹೆಚ್ಚಾಗಬೇಕು ಎಂದರೆ, ಆಯ್ಕೆ ಪ್ರಕ್ರಿಯೆ ಬದಲಾಗಬೇಕು, ಸಂಪೂರ್ಣ ಪಾರದರ್ಶಕವಾಗಿ ಇರಬೇಕು. ಆಯ್ಕೆ ವಿಧಾನ ಡಿಜಿಟಲೀಕರಣಗೊಳ್ಳಬೇಕು.
–ಪ್ರಹ್ಲಾದ್ ವಾ. ಪತ್ತಾರ, ಯಡ್ರಾಮಿ, ಕಲಬುರ್ಗಿ