ಎಲ್ಲಾ ವಿಶ್ವವಿದ್ಯಾಲಯಗಳಿಗೂ ಏಕರೂಪದ ಪಠ್ಯಕ್ರಮ ಜಾರಿಗೆ ತರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಅಸಂಗತ. ಉನ್ನತ ಶಿಕ್ಷಣವೆಂಬುದು ಹಲವಿಚಾರಗಳನ್ನು, ವೈವಿಧ್ಯಗಳನ್ನು ಮನನ ಮಾಡಿಕೊಳ್ಳುವುದೇ ಹೊರತು ಉರು ಹೊಡೆದು ಪಾಸಾಗುವುದಲ್ಲ. ಈಗಾಗಲೇ ಓದಲು, ಬರೆಯಲು, ಆಲೋಚಿಸಲು ಕಲಿತಿರುವ ಯುವಜನಾಂಗಕ್ಕೆ ಆ ಕೌಶಲಗಳನ್ನು ಒರೆಗೆ ಹಚ್ಚುವಂತೆ, ಪ್ರಾದೇಶಿಕ ವೈವಿಧ್ಯ, ಭೌಗೋಳಿಕ ವೈವಿಧ್ಯ, ಸಾಂಸ್ಕೃತಿಕ ವೈವಿಧ್ಯ, ಆರ್ಥಿಕ ಏರುಪೇರುಗಳಂತಹ ವಿಚಾರಗಳನ್ನು ಪರಿಗಣಿಸಿ, ಆಯಾ ವಿಶ್ವವಿದ್ಯಾಲಯದ ತಜ್ಞರ ಸಮಿತಿ ಪಠ್ಯಕ್ರಮ ರೂಪಿಸುತ್ತದೆ.