‘ಸುಣ್ಣ ನುಂಗುತ್ತಿರುವ ಗೋಡೆಗಳು’ ಶೀರ್ಷಿಕೆಯ ಲೇಖನದಲ್ಲಿ (ಪ್ರ.ವಾ., ಜುಲೈ 30) ಸಬಿತಾ ಬನ್ನಾಡಿ
ಅವರು ಉನ್ನತ ಶಿಕ್ಷಣ ತಲುಪಿರುವ ಅವನತಿಯ ವಿಶ್ವರೂಪವನ್ನು ಅನಾವರಣಗೊಳಿಸಿದ್ದಾರೆ. ನಮ್ಮ ಪ್ರಲಾಪಗಳು ಬೇವನ್ನು ಬಿತ್ತಿ ಮಾವನ್ನು ಬಯಸಿದಂತೆ ಆಗಿವೆ. ಯಾವುದೇ ಪ್ರಾಯೋಗಿಕವಾದ ಗುಣಮಟ್ಟದ ಮಾನದಂಡಗಳಿಲ್ಲದೆ, ಬಹುತೇಕ ಅಡ್ಡದಾರಿಗಳಲ್ಲಿ ಆಯ್ಕೆಯಾಗುವ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಿಂದ ಒಳ್ಳೆಯದನ್ನು, ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಅವರು ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಮೂಲಕ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರನ್ನು ನೇಮಕ ಮಾಡಲು ಮುಂದಡಿ ಇಟ್ಟಿದ್ದರು. ಪಟ್ಟಭದ್ರ ಹಿತಾಸಕ್ತಿಗಳು ಸ್ವಾಯತ್ತತೆಯ ನೆಪವೊಡ್ಡಿ ಇದನ್ನು ವಿರೋಧಿಸಿದರು. ಅದು ನನೆಗುದಿಗೆ ಬಿದ್ದಿತು.