ಒಂದನೆಯದು, ಇಲ್ಲಿನ ಪರಿಸರಕ್ಕೆ ಈಗಾಗಲೇ ಆಗಿರುವ ಗಾಸಿಯನ್ನು ಸರಿಪಡಿಸುವ ಕಾರ್ಯ. ಪರ್ವತಶ್ರೇಣಿ, ಕಾಡು, ಗೋಮಾಳ, ನದಿತಪ್ಪಲು, ಕೃಷಿಭೂಮಿ- ಎಲ್ಲೆಡೆಯ ಪರಿಸರವನ್ನು ಪುನಶ್ಚೇತನಗೊಳಿಸುವ ಸೂಕ್ತ ಕಾರ್ಯನೀತಿ ಜಾರಿಯಾಗಬೇಕಿದೆ. ಇದು ಸರ್ಕಾರ ಹಾಗೂ ನಾಗರಿಕ ಸಮಾಜವು ಜಂಟಿಯಾಗಿ ಹಲವು ಹಂತಗಳಲ್ಲಿ ಸಾಧಿಸಬೇಕಾದ ಸವಾಲು. ಎರಡನೆಯದು, ಭವಿಷ್ಯದಲ್ಲಿ ಈ ಅಪಾಯಗಳನ್ನು ತಡೆಗಟ್ಟುವ ಉದ್ದೇಶದ ಸೂಕ್ತ ‘ನೆಲ-ಜಲ ಬಳಕೆ ನೀತಿ’ಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು. ಕೃಷಿ, ವಸತಿಪ್ರದೇಶ, ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ, ಪರಿಸರದ ಸೂಕ್ಷ್ಮತೆಯನ್ನು ಪುರಸ್ಕರಿಸುವ ಶಿಸ್ತಿನ ಚೌಕಟ್ಟಾಗಬೇಕು ಅದು.