15 ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮ್ನಿ ಕಾರೊಂದರ ಫೋಟೊವನ್ನು ಟ್ವಿಟರ್ನಲ್ಲಿ ಅಪ್ಲೋಡ್ ಮಾಡುವ ಮೂಲಕ ಬೆಂಗಳೂರಿನ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ (ಪ್ರ.ವಾ., ಜ. 30).
ಇದು ಕೇವಲ ಕಾಗದದ ಮೇಲಿನ ಆದೇಶ ಆಗಬಾರದು. ಪ್ರತಿ ಶಾಲಾ ವಾಹನದ ಮೇಲೂ ಸಾರಿಗೆ ವಲಯದ ಅಧಿಕಾರಿಗಳು ‘ಇಂತಿಷ್ಟು ಮಕ್ಕಳ ಪ್ರಯಾಣಕ್ಕೆ ಮಾತ್ರ’ ಎಂದು ದೊಡ್ಡದಾಗಿ ಬರೆಸಿ ನಿರ್ದಿಷ್ಟ ಗುರುತು ಸಂಖ್ಯೆಯನ್ನು ನೀಡಲಿ. ಸಿಗರೇಟ್ ಪ್ಯಾಕಿನ ಮೇಲೆ ಎಚ್ಚರಿಕೆಯ ಸಂದೇಶ ಬರೆದಂತೆ ಅದು ಪೋಷಕರಿಗೆ ಎದ್ದು ಕಾಣುತ್ತದೆ. ಕುರಿಗಳನ್ನು ತುಂಬುವಂತೆ ಮಕ್ಕಳನ್ನು ತುಂಬಿಸಿಕೊಂಡು ಹೋಗುವ ಶಾಲಾ ವಾಹನಗಳ ಬಗ್ಗೆ ಪೋಷಕರು ಸಹ ಎಚ್ಚರಿಕೆ ವಹಿಸಬೇಕು. ಪೊಲೀಸರು ಬರೀ ಎಚ್ಚರಿಕೆ ನೀಡುವ ಬದಲು ಭಾರಿ ದಂಡವನ್ನು ವಿಧಿಸಿದರೆ ಇಂತಹ ಸ್ಥಿತಿಗೆ ಕಡಿವಾಣ ಹಾಕಬಹುದು. ಮುಂದಿನ ಶೈಕ್ಷಣಿಕ ವರ್ಷಾರಂಭಕ್ಕೆ ಮುನ್ನ ದಿಟ್ಟ ನಿಲುವನ್ನು ಪೊಲೀಸರೂ ಪೋಷಕರೂ ತೆಗೆದುಕೊಳ್ಳಲಿ.