ಆಹಾರ ಆಯ್ಕೆಯ ಬಗೆಗೆ ಹಂಸಲೇಖಾ ಅವರ ಹೇಳಿಕೆ, ನಂತರ ನಡೆಯುತ್ತಿರುವ ವಾಗ್ಯುದ್ಧ, ಪ್ರತಿಭಟನೆಗಳು ಸಮಾನತೆಯ ಮುಖವಾಡದ ಹಿಂದಿರುವ ತಾರತಮ್ಯ, ಹೊರಗಿಡುವಿಕೆಯ ದುಷ್ಟ ಉತ್ಸಾಹಕ್ಕೆ ಹಿಡಿದ ಕೈಗನ್ನಡಿಯಂತಿವೆ. ಸ್ವಾತಂತ್ರ್ಯದ ಎಪ್ಪತ್ತೈದನೇ ವರ್ಷವನ್ನು ಆಚರಿಸುತ್ತಿರುವ ದೇಶದಲ್ಲಿ ಆಹಾರದ ಆಯ್ಕೆಗೆ ಸಂಘರ್ಷಗಳೇರ್ಪಡುತ್ತಿರುವುದು ಏನೂ ಶೋಭೆಯಲ್ಲ. ಅನ್ನವೇ ಬ್ರಹ್ಮವೋ ಅಥವಾ ಬಾಡೇ ದೇವರೋ ಎನ್ನುವುದು ಅವರವರ ಆಯ್ಕೆ. ವಿಶ್ವದ ಮುಕ್ಕಾಲುಪಾಲು ಜನರು ಮಾಂಸಾಹಾರಿಗಳು. ಅವರ ಮೇಲೆ ಸಸ್ಯಾಹಾರವೇ ಶ್ರೇಷ್ಠವೆಂಬ ಒತ್ತಡ ಹೇರುವುದು ಅವೈಜ್ಞಾನಿಕ, ಅವಾಸ್ತವಿಕ, ಅನೈಸರ್ಗಿಕ. ಅದೇವೇಳೆಗೆ ಸಸ್ಯಾಹಾರಿಗಳ ಆಹಾರವನ್ನು ಅವಹೇಳನ ಮಾಡುವುದು ಕುತರ್ಕ. ಆಹಾರದ ನೆಪದಲ್ಲಿ ವ್ಯಕ್ತಿಗಳ ಮೇಲೆ ಆಕ್ರ ಮಣ ಮಾಡುವುದರ ಹಿಂದೆ ಅನ್ಯ ಉದ್ದೇಶಗಳಿದ್ದು, ಅನವಶ್ಯಕ ವಿವಾದಗಳನ್ನು ಮುನ್ನೆಲೆಗೆ ತರಲಾಗುತ್ತಿದೆ.
ಊಟ ಅವರವರಿಚ್ಛೆ. ತಮಗೆ ಬೇಕಾದ, ರುಚಿಸುವ ಆಹಾರವನ್ನು ತಿನ್ನುವ ಹಕ್ಕು ಪ್ರತಿಯೊಬ್ಬರದೂ ಆಗಿದೆ. ಆಗ ಆಹಾರವು ಶ್ರೇಣೀಕರಣದ, ತಾರತಮ್ಯದ ಮೂಲವಾಗುವುದು ತಪ್ಪುತ್ತದೆ. ಅಪೌಷ್ಟಿಕತೆ, ಹಸಿವಿಗೆ ಮೂರನೇ ಒಂದು ಭಾಗ ಮಾನವರು ಬಲಿಯಾಗುವುದು ತಪ್ಪುತ್ತದೆ. ಇದಿರು ಹಳಿಯುವುದರಲ್ಲೇ ಮಗ್ನರಾದವರು ಕನಿಷ್ಠ ನಿಸರ್ಗ ವಿವೇಕವನ್ನು ಅರಿಯುವಂತಾಗಲಿ. ಆಹಾರವೇ ಶ್ರೇಣಿ/ಸ್ಥಾನಬೆಲೆ ನಿರ್ಧರಿಸುವ ಅಳತೆಗೋಲಾಗುವುದು ನಿಲ್ಲಲಿ.