ಕನ್ನಡ ಮಾಧ್ಯಮ ಪಠ್ಯಪುಸ್ತಕಗಳನ್ನು ನೋಡಿದರೆ ಗಾಬರಿಯಾಗುತ್ತದೆ. ಏಕೆಂದರೆ ಅವುಗಳಲ್ಲಿ ಕನ್ನಡ ಅಕ್ಷರಗಳಿವೆಯೇ ವಿನಾ ಸ್ಥಳೀಯ ಸೊಗಡಿಲ್ಲ! ಕನ್ನಡವು ಮಾಧ್ಯಮವಾಗಬೇಕಾದರೆ ಬರೀ ಅಕ್ಷರಗಳು ಕನ್ನಡದಲ್ಲಿದ್ದರೆ ಸಾಲದು. ಅಲ್ಲಿ ಕನ್ನಡದ ಸೊಬಗು ಹಾಗೂ ಲಾಲಿತ್ಯ ತುಂಬಿ ಬರಬೇಕು. ಮೊದಮೊದಲು ನಮ್ಮ ಕರ್ನಾಟಕ ಸರ್ಕಾರವೇ ರಾಜ್ಯ ಮಟ್ಟದ ಪಠ್ಯಪುಸ್ತಕ ರಚನಾ ಸಮಿತಿ ಮಾಡಿ, ಯೋಗ್ಯ ಪುಸ್ತಕಗಳನ್ನು ನಾಡವರ ಕೈಗೆ ಕೊಡುತ್ತಿತ್ತು. ಆದರೆ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಹೆಸರಿನಲ್ಲಿ ಕುಲಗೆಟ್ಟ ಪುಸ್ತಕಗಳನ್ನು ಮಕ್ಕಳ ಕೈಗೆ ಕೊಡುವ ಪರಿಪಾಟ ಶುರುವಾಗಿದೆ.