ಇಂದಿನ ಮಹಿಳೆಯು ಪುರುಷನಿಗೆ ಸರಿಸಮಾನಳಾಗಿ ಎಲ್ಲ ರಂಗಗಳಲ್ಲಿಯೂ ಸಾಧಕಳಾಗಿರುವುದು ಹಲವು ಗಂಡಸರಿಗೆ ನುಂಗಲಾರದ ತುತ್ತಾಗಿದೆ. ಬಹುಶಃ ಈ ಎಲ್ಲಾ ಕಾರಣಗಳೂ ಸೇರಿದಂತೆ ಹೆಣ್ಣನ್ನು ಮಣಿಸಿ ಅವಳ ಸ್ಥೈರ್ಯವನ್ನು ಪುಡಿಗಟ್ಟಲು ಪ್ರಬಲ ಅಸ್ತ್ರವಾಗಿ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಲಿದೆ. ನಾಗರಿಕ ಸಮಾಜವು ತಲೆತಗ್ಗಿಸುವಂತಹ ರೀತಿಯಲ್ಲಿ ಇದು ನಡೆಯುತ್ತಿದ್ದರೂ ಈಗಲೂ ಬಹುತೇಕರಿಗೆ ಅದೊಂದು ಸಂಗತಿಯೇ ಅಲ್ಲ. ಕೆಲವು ವಿಶೇಷ ಪ್ರಕರಣಗಳಲ್ಲಿ ಒಂದಷ್ಟು ಪ್ರತಿಭಟನೆ, ಧಿಕ್ಕಾರಗಳೊಂದಿಗೆ ಮೆರವಣಿಗೆ, ಪತ್ರಿಕಾ ಹೇಳಿಕೆಗಳು, ಇವೆಲ್ಲದರ ಜೊತೆಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಎಡತಾಕುವ ರಾಜಕಾರಣಿಗಳು. ಅಂತೂ ಕೊನೆಗೆ ನ್ಯಾಯ ಸಲ್ಲಿಸುವುದಾಗಿ ವರಿಷ್ಠರ ಭರವಸೆ, ಸಾಂತ್ವನ, ಪರಿಹಾರದೊಂದಿಗೆ ಇಡೀ ಪ್ರಹಸನಕ್ಕೆ ತೆರೆ. ಇಂತಹ ಸ್ಥಿತಿಯಲ್ಲಿ ನಮ್ಮ ಬದುಕು ಕೂಡ ಸುರಕ್ಷಿತವಲ್ಲ. ಹೀಗಾಗಿ, ‘ಜನ ಈಗಲೇ ಎಚ್ಚರಗೊಂಡು ಎಲ್ಲ ಅನಾಚಾರಗಳನ್ನೂ ಒಕ್ಕೊರಲಿನಲ್ಲಿ ವಿರೋಧಿಸದಿದ್ದರೆ ಮುಂದೊಂದು ದಿನ ಹೇಳಲು ಏನೂ ಉಳಿದಿರುವುದಿಲ್ಲ’ ಎಂಬ ಲೇಖನದಲ್ಲಿನ ಮಾತನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ.