ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಅವರು ತಮ್ಮ ಪುತ್ರಿಯನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿ ಮಾದರಿ ಆಗಿದ್ದಾರೆ.
ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಬಳಿಯ ಅಂಗನವಾಡಿಯಲ್ಲಿ ಅವರ ಎರಡೂವರೆ ವರ್ಷದ ಪುತ್ರಿ ಖುಷಿ ಕಲಿಯುತ್ತಿದ್ದಾಳೆ. ಸರ್ಕಾರಿ ಅಂಗನವಾಡಿ ಮೂಲಕ ತನ್ನ ಶೈಕ್ಷಣಿಕ ಬದುಕು ಆರಂಭಿಸಿದ್ದಾಳೆ. ಅಂಗನವಾಡಿಯ ಇತರೆ ಮಕ್ಕಳೊಂದಿಗೆ ಆಟವಾಡುತ್ತ, ಊಟ ಮಾಡುತ್ತ ಬೆರೆಯುತ್ತಿದ್ದಾಳೆ.
ಪ್ರತಿನಿತ್ಯ ಬೆಳಿಗ್ಗೆ ಎಸ್ಪಿ ಅವರೇ ಮಗಳನ್ನು ಖುದ್ದು ಅಂಗನವಾಡಿಗೆ ಬಿಟ್ಟು ಕಚೇರಿಗೆ ತೆರಳುತ್ತಾರೆ.
‘ಶೈಕ್ಷಣಿಕ ಮೌಲ್ಯ ಅರಿಯಲು ಇಂಥ ಸರ್ಕಾರಿ ಅಂಗನವಾಡಿಗಳಿಂದ ಸಾಧ್ಯವಾಗಲಿದೆ. ಈ ಅಂಗನವಾಡಿ ಜಿಲ್ಲೆಯಲ್ಲೇ ಮಾದರಿ ಕೇಂದ್ರವಾಗಿದೆ. ಅದೇ ಕಾರಣಕ್ಕೆ ಈ ಅಂಗನವಾಡಿಗೆ ಸೇರಿಸಿದ್ದೇನೆ’ ಎಂದು ಸುಮನ್ ಡಿ.ಪನ್ನೇಕರ್ ಪ್ರತಿಕ್ರಿಯಿಸಿದ್ದಾರೆ.