1915ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊಟ್ಟ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಹಿಡಿದು, ಇಲ್ಲಿಯವರೆಗೆ ಅನೇಕ ಚಿಂತಕರು ಕನ್ನಡ ಕಾಳಜಿಯ ಹಲವು ಪ್ರಶ್ನೆಗಳನ್ನ, ಸಮ್ಮೇಳನದಲ್ಲಿ ನಡೆಯುವ ಗೋಷ್ಠಿಗಳಲ್ಲಿ ಎತ್ತಿ ತೋರಿಸಿದ್ದಾರೆ. ಆದರೆ ಅವು ಸಮ್ಮೇಳನ ದಲ್ಲಿ ಗುಂಯ್ಗುಟ್ಟಿ, ಮತ್ತೆ ಸ್ತಬ್ಧವಾಗಿವೆ.
ಈ ಬಾರಿ ಗಡಿ ಭಾಗವಾದ ವಿಜಾಪುರದಲ್ಲಿ ಸಮ್ಮೇಳನ ನಡೆಯುತ್ತಿದ್ದು, ಆ ಭಾಗದ ಅನೇಕ ಕನ್ನಡ ಶಾಲೆಗಳು, ಕನ್ನಡ ಉಳಿವಿನ ಸಮಸ್ಯೆಗಳು, ಚರ್ಚೆಯಾಗಿ ಸಾಕಾರಗೊಳ್ಳಬಹುದೆಂದು ಜನ ಕನಸು ಕಾಣುತ್ತಿದ್ದಾರೆ. ಇದುವರೆಗೂ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಗೋಷ್ಠಿಗಳ ವಿಚಾರಗಳು ಜಾರಿಗೆ ಬಾರದೇ ಇದ್ದರೂ, ಈ ಬಾರಿಯಾದರೂ ಚರ್ಚೆಯಾಗುವ ವಿಷಯಗಳು, ಪುಸ್ತಕದಲ್ಲಿ ಮಾತ್ರ ಉಳಿಯದೆ, ಅನುಷ್ಠಾನಗೊಳ್ಳಲಿ.