ಚುನಾವಣೆ ವೇಳೆ ಎತ್ತಿನಹೊಳೆ ಯೋಜನೆ ಕುರಿತು ಭರಪೂರ ಭರವಸೆ ನೀಡುವ ರಾಜಕೀಯ ಮುಖಂಡರು ಚುನಾವಣೆ ಮುಗಿಯುತ್ತಲೇ ಅದನ್ನು ಕಾರ್ಯಗತಗೊಳಿಸುವ ಪ್ರಯತ್ನಗಳನ್ನು ಮರೆತುಬಿಡುತ್ತಾರೆ. ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಬರಪೀಡಿತ ಜಿಲ್ಲೆಗಳ ಜನರ ಆಸೆ ಚಿಗುರಿಸಿ ನಂತರ ಅದು ಕಮರುವಂತೆ ಮಾಡುವುದು ಸರಿಯೆ?
ಈ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಕೊಸರಾಡಬೇಕಾದ ಸ್ಥಿತಿ ಇದೆ. ಅಂತರ್ಜಲ ಮಟ್ಟ ವಿಪರೀತ ಕುಸಿದಿದೆ. ಕೊಳವೆ ಬಾವಿಗಳನ್ನು 1000 ಅಡಿ ತೋಡಿಸಿದರೂ ನೀರು ಸಿಗದ ಸ್ಥಿತಿ ಒದಗಿದೆ. ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ಹೆಚ್ಚಿ ರೈತರ ಬದುಕು ಸುಧಾರಿಸಬಹುದು. ಅದಕ್ಕೆ ಮಾರ್ಗ ಯಾವುದಾದರೂ ಆಗಿರಲಿ, ಅದನ್ನು ಕಾರ್ಯಗತಗೊಳಿಸಬೇಕಾದ ಅಗತ್ಯ ಇದೆ.
ಈ ಎರಡೂ ಜಿಲ್ಲೆಗಳ ಜನರ ಬದುಕು ಮಳೆಯಿಲ್ಲದೆ ಸೊರಗಿದೆ. ಆದರೆ, ಅತಿವೃಷ್ಟಿಗೆ ಸಿಗುವ ಸ್ಪಂದನ ಅನಾವೃಷ್ಟಿಗೆ ಸಿಗುವುದಿಲ್ಲ. ಮಳೆಯಿಂದ ಬೆಳೆ ಹಾನಿಗೊಳಗಾದ ಕೂಡಲೇ ಕೇಂದ್ರದಿಂದ ತಂಡ ಬಂದು ಪರಿಶೀಲನೆ ನಡೆಸುತ್ತದೆ. ಪರಿಹಾರವೂ ಪ್ರಕಟವಾಗುತ್ತದೆ. ಆದರೆ ಬರ ಬೇಗ ಯಾರ ಕಣ್ಣಿಗೂ ಬೀಳುವುದಿಲ್ಲ. ಏಕೆ ಈ ತಾರತಮ್ಯ?