ಪುಸ್ತಕ, ಪತ್ರಿಕೆಗಳಿಗೆ ಹಣ ಪೋಲು ಮಾಡಬಾರದೆಂದು ಬಿಬಿಎಂಪಿ ಸುಮಾರು ₨ 200 ಕೋಟಿ ಗ್ರಂಥಾಲಯ ಸೆಸ್ ಬಾಕಿ ಇಟ್ಟುಕೊಂಡು ನಗರ ಕೇಂದ್ರ ಅಧಿಕಾರಿಗಳನ್ನು ದಬಾಯಿಸುತ್ತಿದೆ ಎಂಬ ಸುದ್ದಿ (ಪ್ರ. ವಾ. ಜುಲೈ 4) ಓದಿ ಇಲಾಖೆಯ ನಿವೃತ್ತ ಅಧಿಕಾರಿಯಾಗಿ ನಾನು ಕಳವಳಗೊಂಡಿದ್ದೇನೆ. ಸದರಿ ಸುದ್ದಿಗೆ ಅಧಿಕಾರಿಗಳು ಸ್ಪಂದಿಸಿಲ್ಲವೆಂದು ವಿಷಾದವಾಗುತ್ತದೆ. ರೋಗಗ್ರಸ್ತ ಬೃಹತ್ ನಗರ ಪಾಲಿಕೆಯಿಂದಾಗಿ ಗ್ರಂಥಾಲಯಗಳು ಕೋಮಾ ಸ್ಥಿತಿ ಯಲ್ಲಿದ್ದರೆ ಅಲ್ಲಿಯ ಜನಪ್ರತಿನಿಧಿಗಳಿಗೆಎಲ್ಲಿಲ್ಲದ ಖುಷಿ ಆಗಿರಲಿಕ್ಕೆ ಸಾಕು!
ಯಾರಾದರೊಬ್ಬರು ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದರೆ ಸಮಸ್ಯೆ ನಿವಾರಣೆ ಆಗುತ್ತದೆಂದು ಒಂದೂವರೆ ದಶಕದ ಹಿಂದೆ ಇಲಾಖೆಯ ನಿರ್ದೇಶಕರು ಹೇಳುತ್ತಿದ್ದ ಮಾತು ಇಂದಿಗೂ ನೆನಪಿದೆ.
‘ಗ್ರಂಥಾಲಯ ಕಾನೂನು, 1955’ ಜಾರಿಗೆ ಬಂದ ಲಾಗಾಯ್ತು ಇದೇ ಪರಿಸ್ಥಿತಿ ಇದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು?