ಎಷ್ಟೇ ದೊಡ್ಡ ವ್ಯಕ್ತಿಯನ್ನಾಗಲೀ, ನಾವು ತ್ಯಾಗ ಮಾಡಲು ಸಿದ್ಧ (ಬಿಜೆಪಿ ಜಾಹಿರಾತು); ನಮ್ಮ ಐದು ವರ್ಷಗಳ ಸಾಧನೆ ಅಮೋಘ - ಬಿಜೆಪಿ ನಾಯಕರ ಭಾಷಣದ ಪ್ರಮುಖ ಅಂಶ ಮತ್ತು ಜಾಹೀರಾತು; ಬಿಜೆಪಿಯ ಮೊದಲ ಮೂರು ವರ್ಷಗಳ ಆಡಳಿತ ಭ್ರಷ್ಟಾಚಾರದಿಂದ ತುಂಬಿ ತುಳುಕಿತ್ತು (ಬಿಜೆಪಿಯ ಹಿರಿಯ ನಾಯಕ ಅಡ್ವಾಣಿ ಬಹಿರಂಗವಾಗಿ ಒಪ್ಪಿಕೊಂಡ ಸತ್ಯ) .
ಈ ಮಾತುಗಳನ್ನು ಪರೀಕ್ಷಿಸಿ ನೋಡಿದರೆ ಸಾಕು, ಬಿಜೆಪಿಯ ಸೋಗಲಾಡಿತನ, ಆತ್ಮವಂಚನೆ ಮತ್ತು ಜನದ್ರೋಹಗಳೆಲ್ಲ ಮನದಟ್ಟಾಗುತ್ತವೆ. ಬಿಜೆಪಿಗೆ ಇವತ್ತು ಮತದಾರರನ್ನು ಎದುರಿಸು ವುದೇ ಕಷ್ಟವಾಗಿರುವುದರಿಂದ ಅದು ದ್ವಂದ್ವ ನಿಲುವು, ಹೇಳಿಕೆಗಳನ್ನು ತೊದಲುತ್ತಾ ತಾನೇ ಬೆತ್ತಲಾಗುತ್ತಿದೆ. ಬಿಜೆಪಿಯೇನೂ ದೊಡ್ಡ ವ್ಯಕ್ತಿ ಯಡಿಯೂರಪ್ಪನವರನ್ನು ತ್ಯಾಗ ಮಾಡಲಿಲ್ಲ.
ಅನಿವಾರ್ಯವಾಗಿ ಅಧಿಕಾರ ಬಿಡಬೇಕಾಗಿ ಬಂದ ಯಡಿಯೂರಪ್ಪನವರೇ ಬಿಜೆಪಿ ತೊರೆದರು. ಅವರನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತಲ್ಲವೇ?
ಧನಂಜಯಕುಮಾರ್ ಸೂಟ್ಕೇಸ್ ಆರೋಪ ಮಾಡಿದ ಕೂಡಲೇ, ಬಿಜೆಪಿಯ ಹಿರಿ ಮರಿ ನಾಯಕರೆಲ್ಲ ಅಡ್ವಾಣಿ ಪರ ನಿಂತು, ಸತ್ಯ ಹರಿಶ್ಚಂದ್ರ ಎಂದೆಲ್ಲ ಹೊಗಳಿದರು. ಅದೇ ಅಡ್ವಾಣಿ ಮೊದಲ 3ವರ್ಷದ ದುರಾಡಳಿತದ ಕುರಿತು ಹೇಳಿದ ಮಾತನ್ನು ಮುಚ್ಚಿಟ್ಟು, 5ವರ್ಷದ ಸಾಧನೆಯ ಬಗ್ಗೆ ಬೊಂಬಡಾ ಬಜಾಯಿಸುವುದು ನಡೆದೇ ಇದೆ.