ಸಾಹಿತ್ಯ ಕ್ಷೇತ್ರದಲ್ಲಿರುವವರು ರಾಜಕೀಯದ ಕುರಿತು ತಟಸ್ಥ ನಿಲುವು ತೆಗೆದುಕೊಳ್ಳಬೇಕು ಎನ್ನುವುದು ಕೆಲವರ
ಅಭಿಪ್ರಾಯವಿರುವಂತಿದೆ. ಅಂದರೆ ರಾಜಕೀಯ ಹೊಲಸು, ಅದನ್ನು ಏಕೆ ಸ್ವಾಮಿ ಮೆತ್ತಿಕೊಳ್ಳುತ್ತೀರಿ ಎಂಬ ಕಾಳಜಿಯೋ ಅಥವಾ ಯಾವುದೋ ಒಂದು ಪಕ್ಷಕ್ಕೆ ಬದ್ಧತೆ ತೋರುವುದರ ಕುರಿತು ಅಸಹನೆಯೋ ಗೊತ್ತಾಗುತ್ತಿಲ್ಲ.
ಸಮಾಜದ ಆಗುಹೋಗುಗಳಿಗೆ ಸಾಹಿತ್ಯಲೋಕದವರು ಸ್ಪಂದಿಸಲೇಬಾರದೇ? ಸಮಾಜ ಗಬ್ಬು ನಾರುತ್ತಿರುವಾಗ ಅದರ ಬಗ್ಗೆ ಸಾಹಿತಿಗಳ ದನಿ ಮೊಳಗದೆ ಹೋದರೆ ಅಂಥ ಸಾಹಿತ್ಯವನ್ನು ಕಟ್ಟಿಕೊಂಡು ಜನಸಾಮಾನ್ಯರಿಗೆ ಏನಾಗಬೇಕಾಗಿದೆ? ಸಮಾಜದ ಒಂದು ಭಾಗವಾಗಿರುವ ಸಾಹಿತಿಗಳು,-ಕಲಾವಿದರು ಖಂಡಿತ ಪ್ರಗತಿಪರ, ಜನಪರ ರಾಜಕೀಯವನ್ನು ಬೆಂಬಲಿಸಬೇಕಾಗುತ್ತದೆ.
ಕೆಲ ಸಾಹಿತಿಗಳಾದರೂ ಬಹಿರಂಗವಾಗಿ ರಾಜಕೀಯದತ್ತ ಬಂದಿರುವುದು ಸ್ತುತ್ಯರ್ಹವೇ. ಆದರೆ ಒಂದು ಕೆಟ್ಟ ರಾಜಕೀಯ ಪಕ್ಷದಿಂದ ರೋಸಿಹೋಗಿ ಇನ್ನೊಂದು ಅಂಥಾದ್ದೇ ಪಕ್ಷದ ಪರವಾಗಿ ನಿಲ್ಲುವ ಮೊದಲು ಅವರು ಯೋಚಿಸುವುದು ಅವಶ್ಯ.
ಕೆಟ್ಟದ್ದನ್ನು ಒಳಿತಿನಿಂದ ಹೋರಾಡಬೇಕೇ ಹೊರತು ಇನ್ನೊಂದು ಕೆಟ್ಟದ್ದರಿಂದ ಅಲ್ಲ, ಅಲ್ಲವೇ?