ತನ್ನ ವಿಭಿನ್ನ ಶೈಲಿಯ ಪ್ರಯೋಗದ ಮೂಲಕ ಮತ್ತು ಕಲಾತ್ಮಕತೆಯ ಮೂಲಕ ದೇಶದಲ್ಲಿ ಮನೆ ಮಾತಾಗಿರುವ ಕಲಾವಿದ ಕಮಲ ಹಾಸನ್. ಇಂತಹ ನಟನ ಅಭಿನಯ, ನಿರ್ದೇಶನ, ನಿರ್ಮಾಣದ ಚಿತ್ರ `ವಿಶ್ವರೂಪಂ' ಅವರ ಬದುಕಿನ ಅಭೂತಪೂರ್ವ ವಿಭಿನ್ನ ಪ್ರಯತ್ನವೂ ಹೌದು.
ಇಂತಹ ಚಿತ್ರದ ಬಿಡುಗಡೆಯ ಬಗ್ಗೆ ಎದ್ದಿರುವ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ನ ಏಕ ಸದಸ್ಯಪೀಠ ಚಿತ್ರ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ. ಆದರೂ ಈ ತೀರ್ಪನ್ನು ಪ್ರಶ್ನಿಸಿ ಮತ್ತೆ ಈ ವಿವಾದದ ಚೆಂಡು ಸುಪ್ರೀಂ ಕೋರ್ಟಿನ ಅಂಗಳದತ್ತ ಹೋಗುತ್ತಿರುವುದು ತುಂಬಾ ನೋವು ತರುವಂತಹ ಸಂಗತಿ.
ಅಷ್ಟಕ್ಕೂ `ವಿಶ್ವರೂಪಂ' ಚಿತ್ರ, ತಾಂತ್ರಿಕತೆಯಲ್ಲಿ ವಿಶ್ವರೂಪವನ್ನೇ ಪ್ರೇಕ್ಷಕನ ಮುಂದೆ ತೆರೆದಿಡುವಂತಿರುವ ಚಿತ್ರ. ಚೇಸಿಂಗ್, ಆ್ಯಕ್ಷನ್ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ಹೀಗಿದ್ದರೂ ಇಂತಹ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವುದು ಅದ್ಯಾವ ನ್ಯಾಯ..?
ಅಂದಹಾಗೇ ಚಿತ್ರದಲ್ಲಿ ಎಲ್ಲೂ ಮುಸ್ಲಿಮರನ್ನು ಭಯೋತ್ಪಾದಕರೆಂದು ಚಿತ್ರಿಸಿಲ್ಲ. ಚಿತ್ರವೇನಾದರೂ ಬಿಡುಗಡೆಗೊಳ್ಳದೇ ಹೋದಲ್ಲಿ `ಸಕಲಕಲಾವಲ್ಲಭ' ಬೀದಿಗೆ ಬಿದ್ದು, ದೇಶವನ್ನೇ ತೊರೆಯುವ ಸ್ಥಿತಿಗೆ ಬಂದು ನಿಂತಿದ್ದಾರೆಂದರೆ ಅವರ ಸ್ಥಿತಿ ಹೇಗಿರಬೇಕೆಂದು ಯೋಚಿಸಿ .