ಒಂದು ತಿಂಗಳಿನಿಂದ ನಮ್ಮ ಮನೆಗೆ ನೀರು ಬಾರದೆ ಕಡೆಗೆ ಖಾಸಗಿ ಪ್ಲಂಬರ್ ಒಬ್ಬರನ್ನು ಹಿಡಿದು ಹಳೆಯ ಪೈಪ್ಗಳನ್ನು ಬದಲಾಯಿಸಿದ ಮೇಲೆ ಸ್ವಲ್ಪ ನೀರು ಬರುತ್ತದೆ. ಸುಮಾರು ₨ 2,000 ಖರ್ಚು ಮಾಡಬೇಕಾಯಿತು. ಮಳೆ ಬರತೊಡಗಿದ್ದರಿಂದ ಅಗೆದ ಗುಂಡಿಯ ಮೇಲೆ ಮಣ್ಣಿನ ದಿಬ್ಬವನ್ನು ಮಾಡಿ ಮಾರನೆಯ ದಿನ ಕೆಲಸ ಮುಗಿಸುವಂತೆ ವ್ಯವಸ್ಥೆ ಮಾಡಿಕೊಳ್ಳಲಾಯಿತು. ಇದು ನಮ್ಮ ಕಾಂಪೌಂಡ್ನಿಂದ ಎರಡೂವರೆ ಅಡಿ ದೂರವಿದೆ. ನೀರಿನ ಪೈಪು ಹಾದು ಹೋಗಿರುವುದು ಅಲ್ಲೇ. ಇದು ಸಾರ್ವಜನಿಕ ರಸ್ತೆಗೆ ಲಗತ್ತಾಗಿಲ್ಲ.
ಚಾಲಕನೊಬ್ಬ ತನ್ನ ಕಾರನ್ನು ಗೋಡೆಗೆ ಒತ್ತರಿಸುವಂತೆ ತಂದು, ಸಡಿಲವಾದ ಮಣ್ಣಿನ ದಿಬ್ಬದ ಮೇಲೆ ಹತ್ತಿಸಿ ನಿಲ್ಲಿಸಿದ. ನೀರಿನ ಕೊಳವೆ ಹಾಕಿರುವ ಮಣ್ಣಿನ ಗುಡ್ಡೆಯ ಮೇಲೆ ಚಕ್ರವನ್ನು ಹತ್ತಿಸಬಾರದಾಗಿತ್ತೆಂದೂ, ಪೈಪ್ ಒಡೆದು ನೀರು ಉಕ್ಕುತ್ತಿದೆಯೆಂದೂ ಆತನಿಗೆ ತಿಳಿಸಿದೆ. ಆ ಚಾಲಕನು ನನಗೆ ಹೀನಾಮಾನ ಬೈಯ್ದ. ಅವನಿಗೆ ಸಹಾಯಕರಾಗಿ ಕಾರಿನಲ್ಲಿ ಬಂದಿದ್ದವರೂ ಸೊಂಟದ ಕೆಳಗಿನ ಭಾಷೆಯಲ್ಲಿ ನನ್ನನ್ನು ನಿಂದಿಸಿದ್ದಲ್ಲದೇ ನನ್ನ ಮೇಲೆ ಕೈಮಾಡಲು ಬಂದರು. ಆನಂತರ ಗುಂಪಿಗೆ ಸೇರ್ಪಡೆಯಾದ ಮಹಿಳೆಯೊಬ್ಬರು ನನಗೆ ಬೆದರಿಕೆ ಹಾಕಿದ್ದಲ್ಲದೇ ‘ನಿನಗೆ ಬರೀ ಒದ್ದರೆ ಸಾಲದು, ನಿನ್ನ ಕತೆ ಮುಗಿಸಿಬಿಡುತ್ತೇನೆ ಇರು’ ಎನ್ನುತ್ತಾ ಎಲ್ಲಿಂದಲೊ ಐದಾರು ಜನರನ್ನು ಕರೆಸಿಕೊಂಡರು. ಕೊನೆಗೆ ಅವರಿವರು ಸೇರಿ, ಈ ಗುಂಪಿನಿಂದ ನನಗೆ ಏಟುಗಳು ಬೀಳುವುದನ್ನು ತಪ್ಪಿಸಿದರು.
ಪೊಲೀಸರಿಗೆ ದೂರು ಕೊಡುತ್ತೇನೆ ಎಂದಾಗ ನನಗೆ ₨ 2,000 ಕೊಟ್ಟು ಸುಮ್ಮನಾಗಿಸಲು ನೋಡಿದರು. ನಾನು ಹಣವನ್ನು ಮುಟ್ಟಲಿಲ್ಲ. ಮನೆಯಿಂದ ಪೊಲೀಸ್ ಠಾಣೆ 4 ಕಿ.ಮೀ. ದೂರದಲ್ಲಿದೆ. ನನ್ನ ಬಳಿ ವಾಹನವಿಲ್ಲ, ನಡೆಯಲು ತ್ರಾಣವಿಲ್ಲ. ಒಬ್ಬಂಟಿಗನಾದ ನನ್ನ ವಯಸ್ಸು 70ರ ಸಮೀಪದಲ್ಲಿದೆ. ಹಿರಿಯ ನಾಗರಿಕನಾದ ನನ್ನನ್ನು ಅವರು ಬೆದರಿಸಿದಂತೆ ಒದ್ದುಪದ್ದು ಮಾಡಿದರೆ ಬಹುಶಃ ನಾನು ಚೇತರಿಸಿಕೊಳ್ಳಲಾರೆ. ಅವರು ಬೇಕಾದಷ್ಟು ಹಣ ಉಳ್ಳವರು. ನನ್ನ ಬಳಿ ಇಲ್ಲ. ಹಣಬಲದ ಒಂದೇ ಕಾರಣಕ್ಕೆ ಅವರು, ಅಸಹಾಯಕರಾದ ನಮ್ಮಂಥವರ ಮೇಲೆ ಹಿಂಸಾಚಾರಮಾಡಬಹುದೇ? ಈ ದೇಶದಲ್ಲಿ ನಮ್ಮಂತಹ ಹಿರಿಯ ನಾಗರಿಕರಿಗೆ ಬದುಕುವ ಹಕ್ಕೇ ಇಲ್ಲವೆ? ಇತ್ತೀಚೆಗೆ ಮರ್ಯಾದೆಯಿಂದ ಬಾಳುವುದೇ ದುಸ್ತರವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.