ಯುಗಾದಿಯ ಹೊಸ್ತಿಲಲ್ಲಿ ಪ್ರಕೃತಿ ಚಳಿಯ ಹೊದಿಕೆಯಿಂದೆದ್ದು ಮತ್ತೆ ಮೈತುಂಬಿಕೊಂಡಿದೆ. ಎಲೆಗಳೇ ಹೂವುಗಳ ಬಣ್ಣತುಂಬಿ ನಿಸರ್ಗವು ರಂಗು ರಂಗಾಗಿದೆ. ಈ ಸಂಭ್ರಮಕ್ಕೆ ಜನರೂ ಜೊತೆಯಾಗಿ; ಹೋಳಿಯ ನೆಪದಲ್ಲಿ ಬಣ್ಣದೋಕುಳಿಯಲ್ಲಿ ಈಜಲು ಸಿದ್ಧರಾಗಿದ್ದಾರೆ. ಕೃಷ್ಣ–ರಾಧೆಯ ನೆನಪಿನಲ್ಲಿ ಬಣ್ಣವನೆರಚಿಕೊಂಡು ಜನರು ಸಂಭ್ರಮಿಸುವುದನ್ನು ಮನಸಲ್ಲಿ ಸೆರೆಹಿಡಿದು, ಮಸೂರದಲ್ಲಿ ತುಂಬಿ ಕೊಟ್ಟಿದ್ದಾರೆ ಪುಣೆಯ ಖ್ಯಾತ ಛಾಯಾಗ್ರಾಹಕ ಅರುಣ್ ಸಹಾ. ಶ್ರೀಕೃಷ್ಣ ಓಡಾಡಿದ ಮಥುರಾದ ನಂದಗಾಂವ್ನ ಜನರು ರಾಧೆಯ ಊರು ಬರಸಾನಾಗೆ ಬಂದು ಇಲ್ಲಿನ ಜನರ ಜೊತೆಗೂಡಿ ಬಣ್ಣ ಎರಚಾಡುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಭಾರತದಿಂದಷ್ಟೇ ಅಲ್ಲ ವಿದೇಶಗಳಿಂದಲೂ ಜನ ಬರುತ್ತಾರೆ. ಇಲ್ಲಿ ನಡೆಯುವುದು ಕೇವಲ ಬಣ್ಣಗಳ ಎರೆಚಾಟವಲ್ಲ. ಹಲವು ವಿಶೇಷಗಳು ಇಲ್ಲಿವೆ. ಇಲ್ಲಿ ವಿಧವೆಯರೂ ತಮ್ಮ ದುಃಖವನ್ನು ಬಣ್ಣಗಳಿಂದ ಮರೆಮಾಚುತ್ತಾರೆ, ಆಧುನಿಕ ರಾಧೆಯರು ತಮ್ಮ ಕೃಷ್ಣನಿಗೆ ಲಾಠಿಯಿಂದ ಬಾರಿಸುವುದನ್ನು ನೋಡುವುದೇ ಖುಷಿ, ಬಣ್ಣದ ಸಮುದ್ರದಲ್ಲಿ ಜಾತಿ, ಧರ್ಮಕ್ಕೆಲ್ಲಿ ಜಾಗ....ಈ ಬಣ್ಣದ ಲೋಕದ ವರ್ಣನೆಯನ್ನು ಚಿತ್ರಗಳೇ ಹೇಳುತ್ತವೆ ನೋಡಿ...