ನನ್ನ ಹೆಸರು ವೆಂಕಟೇಶ. ಪೀಣ್ಯದಲ್ಲಿ ತರಕಾರಿ ಮಾರುವ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದೇನೆ. ಜೊತೆಗೆ ಟೈಲರಿಂಗ್ ಕೆಲಸವನ್ನು ಮಾಡುತ್ತೇನೆ. ಹೆಂಡತಿ ಗೃಹಿಣಿ. ನನಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಹಿರಿಯ ಮಗಳು ಪದವಿ ಪೂರೈಸಿ ಮಾರತಹಳ್ಳಿಯ ಶಾಮ್ ಫ್ಯಾನ್ಸಿಸ್ಟೋರ್ನಲ್ಲಿ ಕೆಲಸ ಮಾಡುತ್ತಾಳೆ. ಕಿರಿಯ ಮಗಳು ಪಿಯುಸಿ ಪೂರ್ಣಗೊಳಿಸಿ ದ್ದಾಳೆ. ಯಶವಂತಪುರದ ಟೆಕ್ಸ್ಪೋರ್ಟ್ ಗಾರ್ಮೆಂಟ್ಸಿನಲ್ಲಿ ಕೆಲಸ ಮಾಡುತ್ತಾಳೆ. 2ನೇ ಹಂತದ ಹೆಗ್ಗನಹಳ್ಳಿಯಲ್ಲಿ ಹತ್ತಿರ ಬಾಡಿಗೆ ಮನೆಯಲ್ಲಿ ಇದ್ದೇವೆ. ಇಬ್ಬರ ಕೆಲಸದ ಸ್ಥಳಗಳು ದೂರವೇ, ಆದರೆ ಕೆಲಸ ಸಿಗಬೇಕಲ್ಲವಾ ಹಾಗಾಗಿ ಪ್ರತಿದಿನ ಮನೆಯಿಂದಲೇ ಬೆಳಿಗ್ಗೆಯೇ ಕೆಲಸಕ್ಕೆ ಹೊರಡುತ್ತಾರೆ.
ಈಗ ಮಳೆಗಾಲ ಆಗಿರುವುದರಿಂದ ತರಕಾರಿ ನೆನೆಯದಂತೆ ನೋಡಿಕೊಳ್ಳಬೇಕಾಗಿದೆ. ಮಳೆ ಬಂತೆಂದರೆ ತರಕಾರಿ ಜೊತೆಗೆ ನಾನು ಆಶ್ರಯ ಪಡೆಯಬೇಕಲ್ಲ, ಅದಕ್ಕೆ ಮನೆಯ ಸಮೀಪವೇ ತರಕಾರಿ ಅಂಗಡಿ ಹಾಕಿದ್ದೇನೆ. ಒಂದೊಂದು ದಿನ ವ್ಯಾಪಾರವೇ ಆಗುವುದಿಲ್ಲ.
ಪಾವಗಡ ತಾಲ್ಲೂಕು ನನ್ನ ಹುಟ್ಟೂರು. ಬೆಂಗಳೂರಿಗೆ ಬಂದು ಎರಡು ವರ್ಷ ಆಗಿದೆ. ಇತ್ತೀಚೆಗೆ ತರಕಾರಿ ವ್ಯಾಪಾರವೇ ಹೆಚ್ಚಾಗಿ ನನ್ನ ಕೈ ಹಿಡಿದಿದೆ. ಇದರಿಂದ ಸ್ವಲ್ಪ ಮಟ್ಟಿಗೆ ಜೀವನ ಸುಧಾರಿಸಿದೆ. ‘ತರಕಾರಿ ಕೊಳ್ಳಲು ಬರುವ ಜನರು ಬಹಳಷ್ಟು ಸಾಲ ತೀರಾ ಚೌಕಾಶಿ’ ಮಾಡುತ್ತಾರೆ. ವ್ಯಾಪಾರದಲ್ಲಿ ಸಿಟ್ಟು ಮಾಡಿಕೊಂಡರೆ ವ್ಯಾಪಾರ ಸಾಗುವುದಿಲ್ಲ. ಇದು ಬೆಂಗಳೂರಿನಲ್ಲಿ ನಾನು ಕಲಿತ ಪಾಠ‘ ಎನ್ನುತ್ತಾರೆ 59ರ ವೆಂಕಟೇಶ.
ತರಕಾರಿಯನ್ನು ನೆಲಮಂಗಲದ ಬಳಿಯಿರುವ ಸೊಂಡೆಕೊಪ್ಪ ಅಥವಾ ಯಶವಂತಪುರದಿಂದ ತಂದು ಮಾರುತ್ತೇನೆ. ಯಶವಂತಪುರದಿಂದ ಪೀಣ್ಯಕ್ಕೆ ₹200, ಸೊಂಡೆಕೊಪ್ಪದಿಂದ ಪೀಣ್ಯಕ್ಕೆ ₹300 ಆಟೊ ಬಾಡಿಗೆ ಆಗುತ್ತದೆ. ಕೆಲ ಸಂಧರ್ಭದಲ್ಲಿ ಆಟೊ ಬಾಡಿಗೆಯೆ ಹೆಚ್ಚು ಹೊರೆಯಾಗಿದೆ. ನಿತ್ಯ ತರಕಾರಿ ಮಾರಾಟದಿಂದ ₹250 ರಿಂದ ₹300ದುಡಿಯುತ್ತೇನೆ.
ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆ ಮಾರುತಿ ಲೇಔಟ್, ರ್ಯಾಗ್ಲೈನ್ ಸುತ್ತಮುತ್ತಲಿನ ಬೀದಿಗಳಲ್ಲಿ ತರಕಾರಿ ಗಾಡಿ ತಳ್ಳಿಕೊಂಡು ವ್ಯಾಪಾರ ಮಾಡುತ್ತೇನೆ. ಹಾಗೆ ಸಂಜೆ 5 ಗಂಟೆ ನಂತರ ಪೀಣ್ಯ 2ನೇ ಹಂತದ ಬಸ್ ನಿಲ್ದಾಣದ ಪಕ್ಕ ಫುಟ್ಪಾತಿನಲ್ಲಿ ಗಾಡಿನಿಲ್ಲಿಸಿಕೊಂಡು 9–30ರವೆಗೆ ತರಕಾರಿ ವ್ಯಾಪಾರ ಮಾಡುತ್ತೇನೆ. ಟೊಮೆಟೊ, ಮೈಸೂರು ಬದನೆ, ಬೆಂಡೆ, ಬೀನ್ಸ್, ಆಲೂಗೆಡ್ಡೆ, ಸೊಪ್ಪು, ಬದನೆಕಾಯಿ ಸೇರಿದಂತೆ ಬೇರೆ ಬೇರೆ ತರಕಾರಿಗಳನ್ನು ಮಾರುತ್ತೇನೆ.
ಮಕ್ಕಳ ಮದುವೆ ಮಾಡಬೇಕು. ಊರಿನಲ್ಲಿ ಮನೆ ಕಟ್ಟಬೇಕು ಇವೆಲ್ಲವೂ ಸಾಕಾರವಾಗಬೇಕೆಂದು ಹಗಲು ರಾತ್ರಿ ದುಡಿಯುತ್ತಿದ್ದೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.