ನನ್ನ ಗೆಳೆಯ ಚಿಕ್ಕೇಶಿಗೆ ವಸೂಲಿ ವೀರನೆಂದೇ ಅಡ್ಡ ಹೆಸರು ಬಂದು ಬಿಟ್ಟಿದೆ. ಅವನು ಮಾಹಿತಿ ಹಕ್ಕು ಕಾಯ್ದೆಗೂ ಅಣ್ಣಾ ಹಜಾರೆಗೂ ಸೊಪ್ಪು ಹಾಕುವವನಲ್ಲ. ಆಫೀಸಿನ ಕೆಲಸಗಳಿಗೆ ತನ್ನ ಫೀಸು ಇಂತಿಷ್ಟು ಎಂದು ನಿಗದಿಪಡಿಸಿದ್ದ. ಅದನ್ನು ವಸೂಲು ಮಾಡದೆ ಅವನು ಬಿಡುತ್ತಿರಲಿಲ್ಲ.
ಲೋಕಪಾಲ ಮಸೂದೆ ಜಾರಿಗೆ ಬಂದ್ರೆ ನಿಂಗೇ ಕಷ್ಟ ಕಣಯ್ಯೊ ಎಂದು ನಾವು ಕೇಳಿದರೆ, `ಕಷ್ಟ ಬರೋಕೆ ನಂಗೇನೂ `ಕ~ ಕಾರದ ಕಾಟ ಇಲ್ಲ ಕಣ್ರಯ್ಯೊ ಎನ್ನುತ್ತಿದ್ದ! ಅರ್ಥವಾಗದೆ, ನಾವು ಪಿಳಿ ಪಿಳಿ ಕಣ್ಣು ಕಣ್ಣು ಬಿಟ್ಟರೆ ನಗುತ್ತಾ ಅವನು ಹೇಳುತ್ತಿದ್ದುದು- `ಕಲ್ಮಾಡಿ, ಕನಿಮೋಳಿ, ಕಟ್ಟಾ, ಕುಮಾರಸ್ವಾಮಿ ಅಂಥಾ `ಕ~ ಕಾರದ ಕುಳಗಳಿಗೆ ಕಷ್ಟ, ನಂಗೆ ಅಂಥದ್ದೇನೂ ಪ್ರಾಬ್ಲಂ ಇಲ್ಲಯ್ಯ.... ಭಾರೀ ಮಿಕಗಳಿಗೆ ಬೀಸಿದ ಬಲೆಯಲ್ಲಿ ಸಣ್ಣವು ಸುಲಭವಾಗಿ ತೂರಿ ಹೋಗುವುದಿಲ್ವೆ? ಹಾಗೆ ಎನ್ನುತ್ತಿದ್ದ.
ಚಿಕ್ಕೇಶಿ ನಮ್ಮ ಬಡಾವಣೆಯ ನಾಗರಿಕ ಸಮಿತಿಯ ಕಾರ್ಯದರ್ಶಿ. ಗಣ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸುವುದರಲ್ಲಿ ಅವನದು ಪಳಗಿದ ಕೈ. ಸಮಾರಂಭದ ಆಹ್ವಾನ ಪತ್ರಿಕೆ ನಾಗರಿಕ ಸಮಿತಿಯ ಹೆಸರಿನಲ್ಲೇ ಇರುತಿತ್ತು.
ಆದರೆ ಅವನು ಸನ್ಮಾನಿತರಿಂದಲೇ ಸಮಾರಂಭದ ಸಂಪೂರ್ಣ ಖರ್ಚು ವಸೂಲು ಮಾಡುತ್ತಾನೆ ಎಂದು ಜನ ಮಾತನಾಡುತ್ತಿದ್ದರು! ನನ್ನ ಕೈಲೂ ಅವನಿಂದ ತಪ್ಪಿಸಿಕೊಳ್ಳಲು ಆಗಿರಲಿಲ್ಲ! ಆದರೆ ಅವನು ನನಗೆ ಸಮಾರಂಭ ಮಾಡಿದಾಗ ನಾನು ವಂತಿಗೆ ಕೊಟ್ಟ ನೆನಪಿಲ್ಲ.
ವಿಜಯದಶಮಿ ಉತ್ಸವ, ಕನ್ನಡ ರಾಜ್ಯೋತ್ಸವ, ಗಣೇಶೋತ್ಸವ ಬಂದರೆ ಅವನಿಗೆ ಹುರುಪು- ಹುಮ್ಮಸ್ಸು ಹೆಚ್ಚು. ಕೈಯಲ್ಲಿ ರಸೀದಿ ಪುಸ್ತಕ ಹಿಡಿದು, ಪಡ್ಡೆ ಹುಡುಗರ ಪಟಾಲಂ ಜೊತೆ ವಸೂಲಿ ಯಾತ್ರೆ ಹೊರಟನೆಂದರೆ ಬೊಕ್ಕಸ ಭರ್ತಿ!
ಈ ವರ್ಷದ ಉತ್ಸವದ ಸಮಯದಲ್ಲಿ ಕಳೆದ ವರ್ಷದ ಜಮಾ-ಖರ್ಚಿನ ಕರಪತ್ರವನ್ನು ತಪ್ಪದೆ ಮುದ್ರಿಸಿ ಹಂಚುತ್ತಿದ್ದ. ಉಳಿದ ಹಣ ದೇವಸ್ಥಾನದ ಹುಂಡಿಗೆ, ಅಥವಾ ಖೋತಾ ಹಣ ತನ್ನ ಕೈಲಿಂದ ಹಾಕಿದೆ ಎನ್ನುತ್ತಿದ್ದ! ಯಾರೂ ಚಕಾರ ಎತ್ತುತ್ತಿರಲಿಲ್ಲ!
ಆದರೆ ಈ ಬಾರಿ ಗಣೇಶೋತ್ಸವ ಚಂದಾ ವಸೂಲಿಗೆ ಚಿಕ್ಕೇಶಿ ಬರಲಿಲ್ಲ. ಹಬ್ಬ ಮುಗಿದರೂ ಅವನ ಪತ್ತೆ ಇಲ್ಲ. ಎಲ್ಲಿ ಹೋದ ಎಂದು ಯೋಚಿಸುತ್ತಿರುವಾಗಲೇ ಅವನು ಇದ್ದಕ್ಕಿದ್ದಂತೆ ಎದುರಿಗೆ ಕುಂಟುತ್ತಾ ಬಂದ- ತುಂಬ ಸಪ್ಪಗಿದ್ದ, ಮುಂದಲೆ ಮೇಲೆ ಬುಗುಟು! `ಯಾಕೋ, ಕಾಲಿಗೆ ಏನಾಗಿದೆಯೋ ಎಂದೆ.
`ಅಯ್ಯೋ ಏನು ಹೇಳಲಯ್ಯೊ! ಅಣ್ಣಾ ಹಜಾರೆಯವರ ಚಳವಳಿಯ ವಿಜಯೋತ್ಸವದ ಮೆರವಣಿಗೇಲಿ ಹೋಗ್ತಿದ್ದಾಗ ಯಾರೋ ಹಿಂದಿನಿಂದ ತಳ್ಳಿಬಿಟ್ರು, ಕೆಳಗೆ ಬಿದ್ದೆ- ಮಂಡಿ ಒಡೆಯಿತು. ಆಸ್ಪತ್ರೆ ಸೇರಿದ್ದೆ. ಮೊನ್ನೆ ಡಿಸ್ಚಾರ್ಜ್ ಮಾಡಿದ್ದು. ಕಾಲು ತುಂಬ ನೋಯ್ತಾ ಇದೆ ಎಂದ.
`ಓ, ನೀನು ಹಜಾರೆ ಸಿದ್ಧಾಂತದ ಕಡು ವೈರಿ ಅನ್ನೋದು ಗೊತ್ತಿರೋರೇ ದೂಡಿ ಬೀಳಿಸಿರಬೇಕು... ಸರ್ಕಲ್ನಲ್ಲಿ ಸತ್ಯಾಗ್ರಹ ಶಿಬಿರ ಹನ್ನೆರಡು ದಿನ ನಡೆದ್ರೂ ಅತ್ತ ತಿರುಗಿ ನೋಡದವನು ವಿಜಯೋತ್ಸವ ಮೆರಣಿಗೆಗೆ ಯಾಕಯ್ಯೊ ಹೋಗಿದ್ದೆ?
`ಅಲ್ಲಿಗೆ ಹೋಗಲಿಲ್ಲಯ್ಯ. ಆದ್ರೂ ಚಳವಳಿಗೆ ಸಪೋರ್ಟ್ ಮಾಡಿದೆ... ನನಗೆ ಅರ್ಥವಾಗಲಿಲ್ಲ, ಕೇಳಿದೆ- ಏನಯ್ಯ ಹಂಗಂದ್ರೆ?
` ಸತ್ಯಾಗ್ರಹ ಶಿಬಿರದ ನಿರ್ವಹಣೆಗೆ ಸಾಕಷ್ಟು `ನಿಧಿ~ ವಸೂಲು ಮಾಡಿದ್ದೆನಪ್ಪಾ, ಹುಡುಗ್ರನ್ನ ಕಟ್ಕೊಂಡು ಹಗಲೂ ರಾತ್ರಿ ತಿರುಗಿದೆ ಯಾರೂ ಇಲ್ಲ ಅನ್ನಲಿಲ್ಲ.... ಎಂದು ಹೇಳುತ್ತಲೇ `ಅಯ್ಯೋ ಹೊಟ್ಟೆ~ ಹಿಡಿದುಕೊಂಡು ನೋವು ಎಂದು ಅರಚಿದ.
ಏನಾಯ್ತೋ? ಎಂದು ಆತಂಕದಿಂದ ಕೇಳಿದೆ. ನನ್ನ ಫ್ರೆಂಡ್ ಫಿರೋಜ್ ಮನೆಗೆ ಕರೆದುಕೊಂಡು ಹೋಗಿದ್ದ. ಅವನು ರಂಜಾನ್ ಇಫ್ತಿಯಾರ್ ಕೂಟಕ್ಕೆ ಕರೆದಿದ್ದ. ಹೋಗಲು ಆಗಿರಲಿಲ್ಲ. ಮೊನ್ನೆ ಸಿಕ್ಕಿ ಮನೇಲಿ ಬಿರಿಯಾನಿ ಮಾಡಿದ್ದಾರೆ ಬಾ ಅಂತ ಕರಕೊಂಡು ಹೋದ.
`ಏನಯ್ಯ ನಿನ್ನ ಅವಾಂತರ? ನೀನಿಲ್ಲದೆ ಯಾವ ಹಬ್ಬಗಳೂ ಆಗುವುದಿಲ್ಲವಲ್ಲ?~
`ಹ್ಞೂನಪ್ಪಾ, ನಮ್ಮದು ಧರ್ಮ ನಿರಪೇಕ್ಷ ದೇಶ ತಾನೇ? ಎಲ್ಲ ಧರ್ಮದವರೂ ಅನ್ಯೋನ್ಯವಾಗಿರಬೇಕು. ರಂಜಾನ್ನಲ್ಲಿ ರಾಮ ಇದಾನೆ, ದೀಪಾವಳಿ(ಲಿ)ಯಲ್ಲಿ ಅಲಿ ಇಲ್ವೆ?~
ಸರಿ ಸರಿ. ಮುಂದೇನಾಯ್ತು?
ಫಿರೋಜ್ ಒತ್ತಾಯ ಮಾಡಿದ ಅಂತ ಸ್ವಲ್ಪ ಜಾಸ್ತಿನೇ ತಿಂದ್ಬಿಟ್ಟೆ.....
ಆ ಮೇಲೆ ಗಣಪತಿ ವಿಸರ್ಜನೆಯ ದಿನ ನಮ್ಮ ಸ್ನೇಹಿತರು ಊಟಕ್ಕೆ ಕರೆದಿದ್ದರು. ಎಲ್ಲಾ ಕಡೆ ಬೇಡಾ ಅಂದ್ರೂ ತಿನ್ನಿಸಿದರು. ಹೊಟ್ಟೆ ಸ್ವಲ್ಪ ಅಪ್ಸೆಟ್ ಆಗಿದೆ .
`ಬೇಗ ಮನೆಗೆ ಹೋಗಿ ಟ್ಯಾಬ್ಲೆಟ್ ತಗೋಳ್ಳಯ್ಯೊ, ಇಂಥಾ ಹೊತ್ನಲ್ಲಿ ಮನೇಲೇ ಇರಬೇಕು. ಮನೇಲೀ ಯಾರೂ ಇಲ್ಲ! ನಿನ್ನ ಹೆಂಡ್ತಿ?~
ತೌರು ಮನೆಗೆ ಹೋಗಿದಾಳೆ ಚಿಕ್ಕೇಶಿ ಹಣೆಯ ಬುಗುಟು ನೇವರಿಸಿಕೊಂಡ. ಇದು ಏನೋ ಹಣೆ ಮೇಲೆ! ನಾನು ಕೇಳಿದೆ.
ನಾನು ಅಣ್ಣಾ ಸತ್ಯಾಗ್ರಹಕ್ಕೆ ಸಾಕಷ್ಟು ವಂತಿಗೆ ವಸೂಲು ಮಾಡಿದ್ದೆ ಅಂದೆನಲ್ಲ. ಅದನ್ನು ಅಲ್ಲಿಗೆ ತಲುಪಿಸೋಣಾಂತ ಹೋಗ್ತಿದ್ದೆ. ದಾರೀಲಿ ಕ್ಲಾಸ್ಮೆಂಟ್ ಕನಕರಾಜು ಸಿಕ್ದ. ಭಾಳಾ ದಿನಕ್ಕೆ ಸಿಕ್ಕಿದೀಯಾ, ಬಾ ಸ್ವಲ್ಪ ರಿಲ್ಯಾಕ್ಸ್ ಆಗೋಣಾಂದ.
ಬರಲ್ಲ ಅಂದೂ ಬಿಡಲಿಲ್ಲ.ಅಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆಗಿ ಬಾರ್ನೋನ ಸಂಗಡ ಜಗಳ ಆಯ್ತು. ಅದ್ರಲ್ಲಿ ಉಬ್ಬಿದ ಜೇಬಿಗೆ ಕತ್ತರಿ ಬಿದ್ದದ್ದೇ ತಿಳೀಲಿಲ್ವಾ! ಹೇಗೋ ಮನೆಗೆ ಬಂದೆ..... ಹೆಂಡ್ತಿಗೆ ಸತ್ಯಾಗ್ರಹ ಶಿಬಿರಕ್ಕೆ ಹೋಗಿದ್ದೆ ಅಂತ ಹೇಳಿದ್ದೇ ತಪ್ಪಾಯ್ತು.
ಆಮೇಲೆ? ಏನಾಯ್ತೋ?
ಹೆಂಡ್ತಿ, ಹಜಾರೆಯವರು ನಾಳೆ ಉಪವಾಸ ನಿಲ್ಲಿಸ್ತೀನಿ ಅಂತ ಹೇಳಿದಾರೆ. ಟೀವೀಲಿ ಬರ್ತಾ ಇದೆ. ನೀವು ಎಲ್ಲಿಗೆ ಹೋಗಿದ್ರಿ ಅಂತ ನಿಮ್ಮ ಈ ಅವತಾರ, ನಿಮ್ಮ ಬಾಯಿನ ಸುವಾಸನೆ ಹೇಳ್ತಿದೆ ಅಂತ ಚಂಡಿ ಅವತಾರ ತಾಳಿದಳು.
ಹುಟ್ಟು ಗುಣ ಸುಟ್ಟರೂ ಹೋಗೋಲ್ಲ ಅಂದವಳೇ ಹಲ್ಲು ಕಡೀತಾ ನನ್ನ ಮೇಲೆ ಲಟ್ಟಣಿಗೆ ಪ್ರಯೋಗ ಮಾಡ್ಬಿಟ್ಟಳು. ನಾನು ತಪ್ಪಿಸ್ಕೊಳ್ಳೊ ಹೊತ್ತಿಗೆ ಅದು ಹಣೆಗೆ ಬಡಿದೇ ಬಿಡ್ತು..... ಆಮೇಲೆ ಅವಳು ಬುಸುಗುಟ್ಟುತ್ತಾ ಅಷ್ಟೊತ್ತಿನಲ್ಲೇ ತೌರು ಮನೆಗೆ ಹೋಗಿಬಿಟ್ಳು!
ನೋಡಯ್ಯೊ, ಇದೆಲ್ಲಾ ನೀನು ಅಣ್ಣಾ ಹಜಾರೆಯವರ ಬಗ್ಗೆ ಹೀಗೆ ಅಪ್ರಾಮಾಣಿಕವಾಗಿ ನಡೆದುಕೊಂಡಿದ್ದಕ್ಕೆ ಆಗಿರೋ ಶಿಕ್ಷೆ, ತಿಳ್ಕೋ.
ಅಲ್ಲಯ್ಯೊ, ನಂಗೆ ಗಣೇಶನ ಶಾಪವೂ ತಟ್ಟಿರಬೇಕು ಅಂತೀನಿ..... ಚೌತಿ ಚಂದ್ರನ್ನ ಅಕಸ್ಮಾತ್ತಾಗಿ ನೋಡ್ಬಿಟ್ಟೆ -ಚಿಕ್ಕೇಶಿ ಮುಲುಕಿದ. ನನಗೆ ಪಾಪ ಎನ್ನಿಸಿತು. ತಪ್ಪಾಯ್ತು ಅಂತ ಒಪ್ಕೊಂಡು ನಿನ್ನ ಹೆಂಡ್ತಿನ ಕರ್ಕೊಂಡು ಬಾ ಹೋಗೋ .
ಹಿಂದೆ ಭಾಳಾ ಸಾರಿ ಹೀಗೆ ಹೇಳಿದೀನಿ. ಈಗ ಅವಳು ಬರೋದು ಅನುಮಾನ. ದಯವಿಟ್ಟು ನೀನೂ ನನ್ನ ಜೊತೆ ಬಾರಯ್ಯೊ, ನಿನ್ನ ಮಾತು ಆಕೆ ಖಂಡಿತಾ ಕೇಳ್ತಾಳೆ.
ನನ್ನ ಕೈಗಳು ತಲೆ ಮೇಲೆ ಹೋದವು- ಫಿರೋಜು, ಗಣಪತಿ ಎಲ್ಲ ಒಟ್ಟಿಗೆ ನೆನಪಿಗೆ ಬಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.