ನವದೆಹಲಿ: ಕೋವಿಡ್–19 ಸೋಂಕಿಗೆ ತುತ್ತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಲ್ಲ ಸದಸ್ಯರು ಗುಣಮುಖರಾಗಿದ್ದಾರೆ ಎಂದು ಆ ಫ್ರ್ಯಾಂಚೈಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಶಿ ವಿಶ್ವನಾಥನ್ ಮಂಗಳವಾರ ಹೇಳಿದ್ದಾರೆ. ಹೋದ ವಾರ ತಂಡದ ಇಬ್ಬರು ಆಟಗಾರರು ಸೇರಿದಂತೆ 13 ಸದಸ್ಯರಲ್ಲಿ ಸೋಂಕು ದೃಢಪಟ್ಟಿತ್ತು.
ಭಾರತ ರಾಷ್ಟ್ರೀಯ ತಂಡದಲ್ಲಿ ಆಡುವ ವೇಗಿ ದೀಪಕ್ ಚಾಹರ್ ಹಾಗೂ ಭಾರತ ಎ ತಂಡದ ಬ್ಯಾಟ್ಸ್ಮನ್ ಋತುರಾಜ್ ಗಾಯಕವಾಡ್ ಸೋಂಕಿತರಲ್ಲಿ ಸೇರಿದ್ದರು. ಸದ್ಯ ಅವರೆಲ್ಲರೂ 14 ದಿನಗಳ ಕ್ವಾರಂಟೈನ್ನಲ್ಲಿದ್ದಾರೆ.
’ಹೌದು, ಕೋವಿಡ್ ಸೋಂಕಿತ ಎಲ್ಲ ಸಿಬ್ಬಂದಿಯ ವರದಿ ನೆಗೆಟಿವ್ ಬಂದಿದೆ. ಗುರುವಾರ ಅವರು ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ. ಶುಕ್ರವಾರದಿಂದ ನಮ್ಮ ತಂಡದ ಅಭ್ಯಾಸ ಆರಂಭವಾಗುವ ನಿರೀಕ್ಷೆಯಿದೆ‘ ಎಂದು ವಿಶ್ವನಾಥನ್ ಹೇಳಿದರು.
‘ದೀಪಕ್ ಹಾಗೂ ಋತುರಾಜ್ ಅವರು ಇನ್ನೂ ಎರಡು ಬಾರಿ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲಿದ್ದು, 14 ದಿನಗಳ ಕ್ವಾರಂಟೈನ್ ಮುಗಿಸಿ ಅಭ್ಯಾಸಕ್ಕೆ ಸೇರಿಕೊಳ್ಳಲಿದ್ದಾರೆ‘ ಎಂದು ಅವರು ವಿವರಿಸಿದರು.