ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್‌ರೌಂಡರ್‌ಗಳ ‘ವಿಶ್ವ’

Last Updated 21 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಕೇದಾರ್ ಜಾಧವ್, ವಿಜಯಶಂಕರ್..

ಇಂಗ್ಲೆಂಡ್‌ನಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇವರ ಮೇಲೆ ಭಾರತ ಕ್ರಿಕೆಟ್‌ ಅಭಿಮಾನಿಗಳ ಕಣ್ಣು ನೆಟ್ಟಿದೆ. ಏಕೆಂದರೆ ಇವರೆಲ್ಲರೂ ಆಲ್‌ರೌಂಡರ್‌ಗಳು.

ವಿಶ್ವಕಪ್ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಭಾರತವೂ ಸೇರಿದಂತೆ ಬಹುತೇಕ ಎಲ್ಲ ವಿಶ್ವಕಪ್ ವಿಜೇತ ತಂಡಗಳ ಯಶಸ್ಸಿಗೆ ಆಲ್‌ರೌಂಡರ್‌ಗಳ ಆಟವೇ ಪ್ರಮುಖ ಕಾರಣವಾಗಿತ್ತು. 1975 ಮತ್ತು 1979ರಲ್ಲಿ ವೆಸ್ಟ್ ಇಂಡೀಸ್ ನಾಯಕ ಕ್ಲೈವ್‌ ಲಾಯ್ಡ್‌ ಆಲ್‌ರೌಂಡರ್‌ ಆಗಿದ್ದವರು. ಅವರ ಆಟವೇ ವಿಂಡೀಸ್ ಪಾರುಪತ್ಯಕ್ಕೆ ಹೆಚ್ಚು ಕಾರಣವಾಗಿತ್ತು.

1983ರಲ್ಲಿ ಕಪಿಲ್ ದೇವ್ ಆಟವನ್ನು ಯಾರಾದರೂ ಮರೆಯಲು ಸಾಧ್ಯವೇ. ಅವರ 175 ರನ್‌ಗಳ ಶತಕ, ಅವರು ಪಡೆದ ವಿವಿಯನ್ ರಿಚರ್ಡ್ಸ್‌ ಕ್ಯಾಚ್ ಮತ್ತು ಬೌಲಿಂಗ್‌ ದಾಳಿ ಭಾರತದ ಮಡಿಲಿಗೆ ಮೊಟ್ಟಮೊದಲ ವಿಶ್ವಕಪ್ ತಂದು ಕೊಟ್ಟಿದ್ದವು. ಅವರೊಂದಿಗೆ ಇದ್ದ ರೋಜರ್ ಬಿನ್ನಿ, ಮೊಹಿಂದರ್ ಅಮರನಾಥ್ ಮತ್ತು ಮದನ್‌ ಲಾಲ್ ಅವರ ಆಲ್‌ರೌಂಡ್ ಆಟವೂ ಕಮ್ಮಿಯೇನಲ್ಲ. 1987ರಲ್ಲಿ ಬ್ಯಾಟ್ಸ್‌ಮನ್ ಆಗಿ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟೀವ್ ವಾ ತಮ್ಮ ಬೌಲಿಂಗ್ ಮೂಲಕವೂ ಮಿಂಚಿದ್ದರು. ಆ ವರ್ಷ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ಅವರದ್ದೂ ಕಾಣಿಕೆ ಇತ್ತು.

1992ರಲ್ಲಿ ವಾಸೀಂ ಅಕ್ರಂ, ಇಮ್ರಾನ್ ಖಾನ್ ಅವರ ಆಟ ರಂಗೇರಿತ್ತು. ಅವರ ಸ್ವಿಂಗ್ ದಾಳಿ, ಕೆಳಮಧ್ಯಮ ಕ್ರಮಾಂಕದಲ್ಲಿ ಸಿಕ್ಸರ್‌ಗಳ ಅಬ್ಬರ, ಫಿನಿಷಿಂಗ್ ಕೌಶಲ್ಯಗಳು ಅದ್ಭುತವಾಗಿದ್ದವು. ಅವರಿಬ್ಬರ ಆಲ್‌ರೌಂಡ್ ಆಟವೇ ಹೈಲೈಟ್ ಆಗಿತ್ತು. ಪಾಕ್ ಚಾಂಪಿಯನ್ ಆಗಿತ್ತು. ನಂತರದ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಚಾಂಪಿಯನ್ ಪಟ್ಟಕ್ಕೇರಲು ಅರವಿಂದ ಡಿಸಿಲ್ವಾ ಮತ್ತು ಸನತ್ ಜಯಸೂರ್ಯ ಅವರ ಆಟಕ್ಕೆ ಸಾಟಿಯೇ ಇರಲಿಲ್ಲ. 2011ರಲ್ಲಿ ಯುವರಾಜ್ ಸಿಂಗ್ ಅವರ ‘ಸಿಂಹ ಪ್ರತಾಪ’ ಮರೆಯಲು ಹೇಗೆ ಸಾಧ್ಯ?

ಫೈನಲ್‌ ಪಂದ್ಯದಲ್ಲಿ ಗೌತಮ್ ಗಂಭೀರ್ ಮತ್ತು ಮಹೇಂದ್ರಸಿಂಗ್ ಧೋನಿಯ ಬ್ಯಾಟಿಂಗ್ ಅಬ್ಬರ ಮಾತ್ರ ಬಹುಕಾಲ ಸ್ಮತಿಪಟಲದಲ್ಲಿ ಉಳಿದಿದೆ.ಆದರೆ, ಟೂರ್ನಿಯುದ್ದಕ್ಕೂ ಯುವಿಯ ಛಲದ ಆಟಕ್ಕೆ ಸಾಟಿಯೇ ಇರಲಿಲ್ಲ. ಅವರ ಎಡಗೈ ಸ್ಪಿನ್, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತು ಚಿರತೆ ಚುರುಕಿನ ಫೀಲ್ಡಿಂಗ್‌ ಎದುರಾಳಿಗಳ ಗುಂಡಿಗೆ ನಡುಗಿಸಿದ್ದು ಸುಳ್ಳಲ್ಲ. ಒಂಬತ್ತು ಪಂದ್ಯಗಳಿಂದ ಅವರು 362 ರನ್ ಗಳಿಸಿದ್ದರು. 15 ವಿಕೆಟ್‌ಗಳನ್ನೂ ಕಬಳಿಸಿದ್ದರು. 2015ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಟೂರ್ನಿಯುದ್ದಕ್ಕೂ ಯುವಿಯಂತಹ ಒಬ್ಬ ಆಲ್‌ರೌಂಡರ್‌ ಹುಡುಕಾಟ ನಡೆದಿದ್ದು ಸುಳ್ಳಲ್ಲ. ಆ ರೀತಿಯ ಆಟ ಯಾರಿದಂಲೂ ಬರಲಿಲ್ಲ. ಅದೇ ತಂಡದ ಮುನ್ನಡೆಗೆ ಮುಳುವಾಯಿತು.

ಆದರೆ ಮುಂಬರಲಿರುವ ವಿಶ್ವಕಪ್ ಟೂರ್ನಿಯಲ್ಲಿ ನಾಲ್ವರು ಆಲ್‌ರೌಂಡರ್‌ಗಳಿಗೆ ಆಯ್ಕೆ ಸಮಿತಿಯು ಅವಕಾಶ ನೀಡಿದೆ. ಅದರಲ್ಲಿ ಯಾರು ಕಪಿಲ್, ಯುವಿಯ ಮಟ್ಟಕ್ಕೆ ಬೆಳೆಯುವರೋ ಎಂಬ ಕುತೂಹಲ ಗರಿಗೆದರಿದೆ. ‘ಕಾಫಿ ವಿತ್ ಕರಣ್’ ವಿವಾದದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಹಾರ್ದಿಕ್ ಪಾಂಡ್ಯ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಅವರು ಕೂಡ ಐಪಿಎಲ್ ಪಂದ್ಯಗಳಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಈ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿಯೂ ಅವರು ಏಕಾಂಗಿ ಹೋರಾಟ ಮಾಡಿದ್ದರು. ಎಡಗೈ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜ ಅವರಿಗೂ ಆ ಸಾಮರ್ಥ್ಯ ಇದೆ. ಕೇದಾರ್ ಜಾಧವ್ ಮತ್ತು ವಿಜಯಶಂಕರ್ ಅವರು ಈ ಹಿಂದೆ ತಮಗೆ ಅವಕಾಶ ಸಿಕ್ಕಾಗಲೆಲ್ಲ ಸಾಮರ್ಥ್ಯ ಮೆರೆದಿದ್ದಾರೆ. ಆದರೆ ವಿಶ್ವಕಪ್ ಟೂರ್ನಿಯ ಸ್ಪರ್ಧೆಯೇ ಬೇರೆ. ಅಲ್ಲಿಗೇ ಬೇಕಾಗುವ ಮನೋದೈಹಿಕ ಸಾಮರ್ಥ್ಯವೇ ಬೇರೆ. ವಿಶ್ವದ ಸರ್ವಶ್ರೇಷ್ಠ ತಂಡಗಳು ಮತ್ತು ಆಟಗಾರರು ಕಣದಲ್ಲಿರುತ್ತಾರೆ. ಅವರೆಲ್ಲರೊಂದಿಗೆ ಪೈಪೋಟಿ ಮಾಡಿ ಮೇಲೆ ಬರುವವನೇ ಧೀರ. ಅದು ಯಾರು ಬೇಕಾದರೂ ಆಗಬಹುದು? ಏಕೆಂದರೆ, ಕ್ರಿಕೆಟ್‌ನಲ್ಲಿ ಕೊನೆಯ ಎಸೆತದವರೆಗೆ ಏನೂ ಹೇಳಲು ಬರುವುದಿಲ್ಲ. ಅಲ್ಲವೇ?

ಏಕದಿನ ಕ್ರಿಕೆಟ್ ಸಾಧನೆಗಳು

ಹಾರ್ದಿಕ್ ಪಾಂಡ್ಯ (25 ವರ್ಷ)

ಬಲಗೈ ಆಲ್‌ರೌಂಡರ್

ಪಂದ್ಯ: 45

ಇನಿಂಗ್ಸ್: 29

ರನ್: 731

ಶ್ರೇಷ್ಠ: 83

ಶತಕ: 01

ಅರ್ಧಶತಕ: 04

ಗಳಿಸಿದ ವಿಕೆಟ್: 44

––

ರವೀಂದ್ರ ಜಡೇಜ (30 ವರ್ಷ)

ಎಡಗೈ ಆಲ್‌ರೌಂಡರ್

ಪಂದ್ಯ: 151

ಇನಿಂಗ್ಸ್: 101

ರನ್: 2035

ಶ್ರೇಷ್ಠ: 100*

ಅರ್ಧಶತಕ: 10

ವಿಕೆಟ್: 174

––

ವಿಜಯಶಂಕರ್ (28 ವರ್ಷ)

ಬಲಗೈ ಆಲ್‌ರೌಂಡರ್

ಪಂದ್ಯ: 09

ಇನಿಂಗ್ಸ್: 05

ರನ್: 165

ಶ್ರೇಷ್ಠ: 46

ವಿಕೆಟ್: 02

––

ಕೇದಾರ್ ಜಾಧವ್ (34 ವರ್ಷ)

ಬಲಗೈ ಆಲ್‌ರೌಂಡರ್

ಏಕದಿನ: 59

ರನ್: 1174

ಶ್ರೇಷ್ಠ: 120

ಶತಕ: 02

ಆರ್ಧಶತಕ: 05‌

ವಿಕೆಟ್: 27

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT