ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾಕ‍ಪ್‌ ಕ್ರಿಕೆಟ್‌ ಟೂರ್ನಿ: ರಾಜ್ಯದ ಮನೀಷ್‌, ರಾಹುಲ್‌ಗೆ ಸ್ಥಾನ

ವಿರಾಟ್‌ ಕೊಹ್ಲಿಗೆ ವಿಶ್ರಾಂತಿ; ರೋಹಿತ್‌ಗೆ ನಾಯಕತ್ವ
Last Updated 1 ಸೆಪ್ಟೆಂಬರ್ 2018, 14:37 IST
ಅಕ್ಷರ ಗಾತ್ರ

ಮುಂಬೈ: ಮುಂಬರುವ ಏಷ್ಯಾಕ‍ಪ್‌ ಕ್ರಿಕೆಟ್‌ ಟೂರ್ನಿಗೆ ಶನಿವಾರ 16 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಮನೀಷ್‌ ಪಾಂಡೆ ಮತ್ತು ಕೆ.ಎಲ್‌.ರಾಹುಲ್‌ ಅವರಿಗೆ ಅವಕಾಶ ನೀಡಲಾಗಿದೆ.

ಆಯ್ಕೆ ಸಮಿತಿಯು ನಾಯಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಿದೆ. ಹೀಗಾಗಿ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.

ರಾಜಸ್ಥಾನದ ಎಡಗೈ ಮಧ್ಯಮ ವೇಗಿ ಖಲೀಲ್‌ ಅಹ್ಮದ್‌ ಅವರು ಮೊದಲ ಬಾರಿಗೆ ಸೀನಿಯರ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

20 ವರ್ಷ ವಯಸ್ಸಿನ ಖಲೀಲ್‌ ಅವರು 17 ಲಿಸ್ಟ್‌ ‘ಎ’ ‍ಪಂದ್ಯಗಳನ್ನು ಆಡಿದ್ದು 28 ವಿಕೆಟ್‌ ಉರುಳಿಸಿದ್ದಾರೆ.

2016ರಲ್ಲಿ ನಡೆದಿದ್ದ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದ ಅವರು ಇತ್ತೀಚೆಗೆ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದ ಭಾರತ ‘ಎ’ ತಂಡದಲ್ಲೂ ಉತ್ತಮ ಸಾಮರ್ಥ್ಯ ತೋರಿದ್ದರು.

ಕರ್ನಾಟಕದ ಮಯಂಕ್‌ ಅಗರವಾಲ್‌ ಅವರಿಗೆ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ವಿಕೆಟ್‌ ಕೀಪರ್‌ ರಿಷಭ್‌ ಪಂತ್ ಅವರೂ ಆಯ್ಕೆ ಸಮಿತಿಯ ಅವಕೃಪೆಗೆ ಒಳಗಾಗಿದ್ದಾರೆ.

ಯೋಯೋ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಅಂಬಟಿ ರಾಯುಡುಗೆ ಅವಕಾಶ ಸಿಕ್ಕಿದ್ದು, ಗಾಯದಿಂದ ಗುಣಮುಖರಾಗಿರುವ ಆಲ್‌ರೌಂಡರ್‌ ಕೇದಾರ್‌ ಜಾಧವ್‌ ತಂಡಕ್ಕೆ ಮರಳಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದಲ್ಲಿ ಸ್ಥಾನ ಗಳಿಸಿದ್ದ ಸುರೇಶ್‌ ರೈನಾ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌, ವೇಗದ ಬೌಲರ್‌ಗಳಾದ ಸಿದ್ದಾರ್ಥ್‌ ಕೌಲ್‌ ಮತ್ತು ಉಮೇಶ್‌ ಯಾದವ್‌ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.

‘ಕೊಹ್ಲಿ ಅವರು ಸತತವಾಗಿ ಪಂದ್ಯಗಳನ್ನು ಆಡುತ್ತಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಗಳು ನಡೆಯಲಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಕೊಹ್ಲಿಗೆ ವಿಶ್ರಾಂತಿ ನೀಡಿದ್ದೇವೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್‌ ಹೇಳಿದ್ದಾರೆ.

‘ಮಯಂಕ್‌ ಅಗರವಾಲ್‌ ಪ್ರತಿಭಾವಂತ ಆಟಗಾರ. ಹಿಂದಿನ 10–12 ತಿಂಗಳುಗಳಿಂದ ಅವರು ದೇಸಿ ಕ್ರಿಕೆಟ್‌ನಲ್ಲಿ ಸ್ಥಿರ ಸಾಮರ್ಥ್ಯ ತೋರುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದಾಗ ಮಯಂಕ್‌ಗೆ ಖಂಡಿತವಾಗಿಯೂ ಅವಕಾಶ ನೀಡುತ್ತೇವೆ’ ಎಂದು ಪ್ರಸಾದ್‌ ನುಡಿದಿದ್ದಾರೆ.

ತಂಡ ಇಂತಿದೆ: ರೋಹಿತ್‌ ಶರ್ಮಾ (ನಾಯಕ), ಶಿಖರ್‌ ಧವನ್‌ (ಉಪ ನಾಯಕ), ಕೆ.ಎಲ್‌.ರಾಹುಲ್‌, ಮಹೇಂದ್ರ ಸಿಂಗ್‌ ಧೋನಿ (ವಿಕೆಟ್‌ ಕೀಪರ್‌), ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಅಂಬಟಿ ರಾಯುಡು, ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌, ಶಾರ್ದೂಲ್‌ ಠಾಕೂರ್‌ ಮತ್ತು ಖಲೀಲ್‌ ಅಹ್ಮದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT