ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧತ್ವ ಮೀರಿ ಬೆಳೆದ ಸುನಿಲ್

Last Updated 1 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಅಂಧರ ಕ್ರಿಕೆಟ್‌ನಲ್ಲಿ ಭರವಸೆ ಮೂಡಿಸುತ್ತಿರುವ ಕರ್ನಾಟಕದ ಸುನಿಲ್‌ ರಮೇಶ್‌, ರಾಷ್ಟ್ರೀಯ ಏಕದಿನ ಕ್ರಿಕೆಟ್‌ ತಂಡದ ನಾಯಕರೂ ಹೌದು. ಜೀವನದಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿನಿಂತು ಅಲ್ಪ ಅವಧಿಯಲ್ಲೇ ಅಂತರರಾಷ್ಟ್ರೀಯ ಮಟ್ಟದ ಆಟಗಾರರಾಗಿ ಬೆಳೆದಿದ್ದಾರೆ.

ಅಂಧರ ಕ್ರಿಕೆಟ್‌ನಲ್ಲಿ ರಾಜ್ಯದ ಹಲವು ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಇದೀಗ ಭಾರತ ತಂಡದಲ್ಲಿ ಮಿಂಚುತ್ತಿರುವ ರಾಜ್ಯದ ಆಟಗಾರನೆಂದರೆ ಸುನಿಲ್‌ ರಮೇಶ್. ಇವರಿಗೆ ಭಾರತ ಏಕದಿನ ಅಂಧರ ಕ್ರಿಕೆಟ್‌ ತಂಡದ ನಾಯಕತ್ವದ ಜವಾಬ್ದಾರಿಯೂ ಲಭಿಸಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಲ್ಪ ಅವಧಿಯಲ್ಲೇ ನಾಯಕನಾಗುವ ಅದೃಷ್ಟ ಒದಗಿಬಂದಿದೆ. ಚಿಕ್ಕಮಗಳೂರಿನವರಾದ ಸುನಿಲ್‌ ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ. 2016ರ ಏಷ್ಯಾಕಪ್‌ ಮೂಲಕ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ತಂಡದ ಆಧಾರಸ್ತಂಭವಾಗಿ ಬದಲಾದರಲ್ಲದೆ, ಇದೀಗ ನಾಯಕ ಸ್ಥಾನ ಅಲಂಕರಿಸಿದ್ದಾರೆ.

ಮೈಸೂರಿನಲ್ಲಿ ಕಳೆದ ವಾರ ನಡೆದ ನಾಗೇಶ್‌ ಟ್ರೋಫಿ ರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಸುನಿಲ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಕರ್ನಾಟಕ ತಂಡ ಈ ಟೂರ್ನಿಯಲ್ಲಿ ಮೂರು ಪಂದ್ಯಗಳನ್ನು ಆಡಿತ್ತು. ಎಲ್ಲ ಪಂದ್ಯಗಳಲ್ಲೂ ಬಿರುಸಿನ ಬ್ಯಾಟಿಂಗ್‌ನಿಂದ ತಂಡದ ಗೆಲುವಿಗೆ ಕಾರಣರಾಗಿದ್ದರು.

ಹರಿಯಾಣ ವಿರುದ್ಧ 52 ಎಸೆತಗಳಲ್ಲಿ 98 ರನ್‌ ಹಾಗೂ ದೆಹಲಿ ಎದುರು 43 ಎಸೆತಗಳಲ್ಲಿ 79 ರನ್‌ ಕಲೆಹಾಕಿದ್ದ ಅವರು ಗೋವಾ ವಿರುದ್ಧದ ಅಂತಿಮ ಪಂದ್ಯದಲ್ಲಂತೂ ಬೌಲರ್‌ಗಳ ಮೇಲೆ ಸುಂಟರಗಾಳಿಯಂತೆ ಎರಗಿದ್ದರು. 69 ಎಸೆತಗಳಲ್ಲಿ 45 ಬೌಂಡರಿಗಳ ನೆರವಿನಿಂದ ಅಜೇಯ 206 ರನ್‌ ಸಿಡಿಸಿದ್ದರು.

ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಹೋಬಳಿಯ ಗುಡ್ಡದೂರಿನ ಸುನಿಲ್‌ ಅವರು ಹುಟ್ಟುವಾಗ ಎಲ್ಲರಂತೆ ದೃಷ್ಟಿ ಹೊಂದಿದ್ದರು. ಆದರೆ ಸಣ್ಣ ಬಾಲಕನಾಗಿದ್ದಾಗ ಕ್ರಿಕೆಟ್‌ ಆಡುವ ವೇಳೆ ತಂತಿಯೊಂದು ಚುಚ್ಚಿ ಬಲಗಣ್ಣಿನ ದೃಷ್ಟಿ ಸಂಪೂರ್ಣವಾಗಿ ಕಳೆದುಕೊಂಡಿದ್ದರು. ಎಡಗಣ್ಣಿನ ಮೇಲೆ ಹೆಚ್ಚಿನ ಒತ್ತಡ ಬಿದ್ದು ಮಂದ ದೃಷ್ಟಿಯ ಸಮಸ್ಯೆ ಎದುರಿಸಿದರು. ಇದೀಗ ಎಡಗಣ್ಣಿನ ಮೂಲಕ ಅಲ್ಪಸ್ವಲ್ಪ ನೋಡಬಲ್ಲರು.

ಏಳನೇ ತರಗತಿಯವರೆಗೆ ಗುಡ್ಡದೂರಿನಲ್ಲಿ ಕಲಿತ ಅವರು ಪ್ರೌಢಶಾಲೆ ಶಿಕ್ಷಣವನ್ನು ಚಿಕ್ಕಮಗಳೂರಿನ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಪಡೆದರು. ಆಶಾಕಿರಣ ಶಾಲೆಯಲ್ಲಿ ಕಲಿಯುತ್ತಿದ್ದಾಗ ಕ್ರಿಕೆಟ್‌ ಮೇಲೆ ಆಸಕ್ತಿ ಮೂಡಿತು. ಅಂಧರ ಕ್ರಿಕೆಟ್‌ನಲ್ಲಿ ಭವಿಷ್ಯ ರೂಪಿಸುವ ಕನಸಿಗೆ ಬಲ ಬಂತು. ಶಾಲೆಯ ದೈಹಿಕ ಶಿಕ್ಷಕರು ಇವರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರು. ಹೆತ್ತವರು ಜೀವನ ನಿರ್ವಹಣೆಗೆ ಕೂಲಿ ಕೆಲಸ ಮಾಡುತ್ತಿದ್ದರೂ, ಮಗನ ಬೆಂಬಲಕ್ಕೆ ನಿಂತರು.

ಕಠಿಣ ಪರಿಶ್ರಮದ ಮೂಲಕ ರಾಜ್ಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಆ ಬಳಿಕ ಯಶಸ್ಸಿನ ಹಾದಿಯಲ್ಲಿ ಮುನ್ನಡೆದರು. ‘2016ರ ಏಷ್ಯಾ ಕಪ್‌ ಟೂರ್ನಿಗೆ ರಾಷ್ಟ್ರೀಯ ತಂಡಕ್ಕೆ ಆ‌ಯ್ಕೆಯಾದಾಗ ನಂಬಲು ಆಗಲಿಲ್ಲ. ಆ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ’ ಎಂಬುದನ್ನು ನೆನಪಿಸಿಕೊಂಡರು.

2017ರ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯಲ್ಲಿ ಭರ್ಜರಿ ಆಟವಾಡಿದ್ದ ಸುನಿಲ್‌ ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯಾ ವಿರುದ್ಧ ಶತಕ ಗಳಿಸಿ ಮಿಂಚಿದ್ದರು. ‘ಟ್ವೆಂಟಿ–20 ವಿಶ್ವಕಪ್‌ ಟೂರ್ನಿ ನನ್ನ ಬದುಕಿಗೆ ತಿರುವು ನೀಡಿತು. ಅಲ್ಲಿ ನೀಡಿದ ಪ್ರದರ್ಶನ ಆತ್ಮವಿಶ್ವಾಸ ತುಂಬಿತು. ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಮೂಡುವಂತೆ ಮಾಡಿತು’ ಎನ್ನುವರು.

2018 ರಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ 93 ರನ್‌ ಗಳಿಸಿ ಭಾರತ ತಂಡ ಕಪ್‌ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

‘ನನ್ನಂತಹ ಹಳ್ಳಿಗಾಡಿನಿಂದ ಬಂದವನಿಗೆ ಭಾರತ ತಂಡದ ನಾಯಕನಾಗುವ ಅವಕಾಶ ಲಭಿಸಬಹುದು ಎಂಬುದನ್ನು ಕನಸಿಲ್ಲೂ ಯೋಚಿಸಿರಲಿಲ್ಲ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬಲ್ಲೆ’ ಎಂದು ವಿಶ್ವಾಸ ವ್ಯಕ್ತಪಡಿಸುವರು.

ಅಂಧರ ಕ್ರಿಕೆಟ್‌ಗೆ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ಲಭಿಸುತ್ತಿಲ್ಲ ಎಂಬ ಕೊರಗು ಅವರಿಗೆ ಇದೆ. ಟ್ವೆಂಟಿ–20 ವಿಶ್ವಕಪ್‌ ಗೆದ್ದಾಗ ಸರ್ಕಾರದಿಂದ ನಗದು ಬಹುಮಾನ ಲಭಿಸಿತ್ತು. ಆದರೆ ಉದ್ಯೋಗದ ಭರವಸೆ ನೀಡಿದ್ದರೂ ಇನ್ನೂ ಅದು ಈಡೇರಿಲ್ಲ.

‘ಹರಿಯಾಣ, ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಅಂಧರ ಕ್ರಿಕೆಟ್‌ಗೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿಲ್ಲ. ಭಾರತ ಅಂಧರ ಕ್ರಿಕೆಟ್‌ ತಂಡದಲ್ಲಿರುವ ಹರಿಯಾಣದ ಕೆಲವು ಆಟಗಾರರಿಗೆ ಅಲ್ಲಿನ ಸರ್ಕಾರ ಕ್ರೀಡಾ ಕೋಟಾದಡಿ ಉದ್ಯೋಗ ನೀಡಿದೆ. ಆದರೆ ಕರ್ನಾಟಕದಲ್ಲಿ ಅಂತಹ ವ್ಯವಸ್ಥೆ ಇಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು’ ಎಂಬುದು ಈ ಯುವ ಆಟಗಾರನ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT