ಮೈಸೂರು: ಪ್ರಖರ್ ಚತುರ್ವೇದಿ (158) ಹಾಗೂ ಕೆ.ಪಿ. ಕಾರ್ತಿಕೇಯ (121) ಅವರ ಅಮೋಘ ಶತಕಗಳ ನೆರವಿನಿಂದ ಆತಿಥೇಯ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಎರಡನೇ ದಿನವಾದ ಶನಿವಾರ ಉತ್ತರಾಖಂಡ ವಿರುದ್ಧ ಹಿಡಿತ ಸಾಧಿಸಿತು.
ಉತ್ತರಾಖಂಡದ 232 ರನ್ಗಳಿಗೆ ಉತ್ತರವಾಗಿ ದಿನದಾಟ ಮುಗಿದಾಗ ಕರ್ನಾಟಕ 87 ಓವರುಗಳಲ್ಲಿ 5 ವಿಕೆಟ್ಗೆ 360 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ಈಗಾಗಲೇ 128 ರನ್ಗಳ ಮುನ್ನಡೆ ಪಡೆದಿದೆ.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಎರಡು ವಿಕೆಟ್ ಬೇಗನೇ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ನಂತರ ಜೊತೆಯಾದ ಪ್ರಖರ್ ಮತ್ತು ಕಾರ್ತಿಕೇಯ ಜೋಡಿ ಮೂರನೇ ವಿಕೆಟ್ಗೆ 278 ರನ್ ಜೊತೆಯಾಟದ ಮೂಲಕ ಕರ್ನಾಟಕಕ್ಕೆ ಮೇಲುಗೈ ಒದಗಿಸಿತು.
ದಿನದ ಅಂತ್ಯಕ್ಕೆ ಸಮಿತ್ ದ್ರಾವಿಡ್ (17) ಹಾಗೂ ಧೀರಜ್ ಗೌಡ (15) ಅಜೇಯರಾಗುಳಿದಿದ್ದರು.