ಬೆಂಗಳೂರು: ಕೊರೊನಾ ವೈರಸ್ ವಿರುದ್ಧದ ಹೋರಾಟದ ನೆರವಿಗಾಗಿ ಕರ್ನಾಟಕ ರಾಜ್ಯ ಕ್ರಿಕೆ್ಟ್ ಸಂಸ್ಥೆಯು ಒಂದು ಕೋಟಿ ರೂಪಾಯಿ ದೇಣಿಗೆ ನೀಡಲಿದೆ.
‘ಪ್ರಧಾನಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಹಾರ ನಿಧಿಗೆ ₹ 50 ಲಕ್ಷವನ್ನು ಬಿಸಿಸಿಐ ಮೂಲಕ ಮತ್ತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ನೆರವು ನಿಧಿಗೆ ₹ 50 ಲಕ್ಷವನ್ನು ನೀಡಲು ನಿರ್ಧರಿಸಲಾಗಿದೆ. ನಮ್ಮ ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಪದಾಧಿಕಾರಿಗಳ ಒಮ್ಮತದ ನಿರ್ಣಯ ಇದಾಗಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ನಾವು ಸದಾ ಬೆಂಬಲ ನೀಡುತ್ತೇವೆ’ ಎಂದು ಕೆಎಸ್ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
ಶನಿವಾರ ಬಿಸಿಸಿಐ ₹ 51 ಕೋಟಿ ದೇಣಿಗೆ ನೀಡಿತ್ತು.
ಸಹಾಯಕ್ಕೆ ಬದ್ಧ: ಸರ್ಕಾರವು ಯಾವುದೇ ಸಂದರ್ಭದಲ್ಲಿ ನೆರವು ಕೇಳಿದರೂ ನೀಡಲು ನಾವು ಸಿದ್ದ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಕೆಲವು ಊರುಗಳಲ್ಲಿ ನಮ್ಮ ಕ್ರೀಡಾಂಗಣಗಳಿವೆ. ಸರ್ಕಾರ ಕೇಳಿದರೆ ಅವುಗಳ ಮೂಲಕ ಸಹಕರಿಸುತ್ತೇವೆ ಎಂದು ವಿನಯ್ ಮೃತ್ಯುಂಜಯ ಸ್ಪಷ್ಟಪಡಿಸಿದ್ದಾರೆ.