ಮುಂಬೈ:ಕೊರೊನಾ ಸೋಂಕು ಪ್ರಕರಣಗಳು ಅಧಿಕವಾಗಿರುವ ಮುಂಬೈ ಮಹಾನಗರವನ್ನು ಕೆಂಪು ವಲಯವನ್ನಾಗಿ ಗುರುತಿಸಿದ್ದು ಕ್ರೀಡಾ ಚಟುವಟಿಕೆಗಳು ಇನ್ನೂ ಆರಂಭಗೊಂಡಿಲ್ಲ. ಆದ್ದರಿಂದ ಪ್ರಮುಖ ಕ್ರಿಕೆಟಿಗರಾದ ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ಅವರು ವೈಯಕ್ತಿಕ ಅಭ್ಯಾಸಕ್ಕೆ ಇನ್ನಷ್ಟು ಕಾಯಬೇಕಿದೆ.
ಮಹಾರಾಷ್ಟ್ರ ಸರ್ಕಾರವು ಹಸಿರು ಹಾಗೂ ಕಿತ್ತಳೆ ವಲಯಗಳಲ್ಲಿ ಕ್ರೀಡಾಂಗಣಗಳನ್ನು ಅಥ್ಲೀಟುಗಳ ತರಬೇತಿಗೆ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶವಿಲ್ಲ.
ಮುಂಬೈ ಅಲ್ಲದೆ ಅದರ ಪಕ್ಕದ ಪ್ರದೇಶಗಳಾದ ಥಾಣೆ, ನವೀ ಮುಂಬೈ, ಮೀರಾ ಭಯಂದರ್, ವಸಯೀ ವಿರಾರ್ ಹಾಗೂ ಕಲ್ಯಾಣ್ ಡೊಂಬಿವಿಲಿಗಳನ್ನು ಕೆಂಪು ವಲಯಗಳೆಂದು ಘೋಷಿಸಲಾಗಿದೆ.
‘ಕ್ರೀಡಾಂಗಣಗಳನ್ನು ಅಥ್ಲೀಟುಗಳ ಅಭ್ಯಾಸಕ್ಕೆ ಮುಕ್ತವಾಗಿಸುವ ವಿಷಯದಲ್ಲಿ ನಾವು ರಾಜ್ಯ ಸರ್ಕಾರದ ಮಾರ್ಗಸೂಚಿಗಳಿಗೆ ಬದ್ಧರಾಗಿದ್ದೇವೆ’ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ನ (ಎಂಸಿಎ) ಹಿರಿಯ ಅಧಿಕಾರಿಯೋರ್ವರು ಬುಧವಾರ ಹೇಳಿದರು.
ಮುಂಬೈನಲ್ಲಿ ಕೊರೊನಾ ಸೋಂಕಿನ 1,411 ಹೊಸ ಪ್ರಕರಣಗಳು ಸೇರಿ ಮಂಗಳವಾರ ಒಟ್ಟು ಪ್ರಕರಣಗಳ ಸಂಖ್ಯೆ 22,563ಕ್ಕೆ ತಲುಪಿತ್ತು.