ದುಬೈ: ಕೋವಿಡ್–19 ಸೋಂಕಿತರಾಗಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಬ್ಯಾಟ್ಸ್ಮನ್ ಋತುರಾಜ್ ಗಾಯಕವಾಡ್ ಅವರ ಪ್ರತ್ಯೇಕವಾಸ ಮುಂದುವರಿದಿದ್ದು, ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 19ರಂದು ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್ ಎದುರು ಚೆನ್ನೈ ಮೊದಲ ಪಂದ್ಯ ಆಡಲಿದೆ.
‘ಋತುರಾಜ್ ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ.ಅವರು ಇನ್ನೂ ಪ್ರತ್ಯೇಕವಾಸದಲ್ಲಿದ್ದು,ಅಭ್ಯಾಸ ನಡೆಸಲು ಬಿಸಿಸಿಐನ ವೈದ್ಯಕೀಯ ತಂಡ ಇನ್ನೂ ಅನುಮತಿ ನೀಡಿಲ್ಲ. ಟೂರ್ನಿಯ ಮೊದಲ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆ ಇಲ್ಲ. ಮುಂದಿನ ಎರಡು ದಿನಗಳಲ್ಲಿ ಋತುರಾಜ್ ಅವರು ತಂಡದ ಜೀವ ಸುರಕ್ಷಾ ವಾತಾವರಣಕ್ಕೆ ಮರಳಬಹುದು‘ ಎಂದು ಸಿಎಸ್ಕೆ ತಂಡದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಶಿ ವಿಶ್ವನಾಥನ್ ಹೇಳಿದ್ದಾರೆ.
ಐಪಿಎಲ್ ಆಡಲು ಯುಎಇಗೆ ಬಂದಿಳಿದ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ) ತಂಡದ ಆಟಗಾರರಾದ ದೀಪಕ್ ಚಾಹರ್, ಋತುರಾಜ್ ಹಾಗೂ 11 ಸಿಬ್ಬಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಸದ್ಯ ಚಾಹರ್ ಹಾಗೂ 11 ಮಂದಿ ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಎರಡು ಕಡ್ಡಾಯ ಪರೀಕ್ಷೆಗಳ ಬಳಿಕ ತರಬೇತಿಯನ್ನು ಆರಂಭಿಸಿದ್ದಾರೆ.
ಋತುರಾಜ್ ಅವರೂ ಭಾನುವಾರ ಹಾಗೂ ಸೋಮವಾರ ಎರಡು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಇದರ ಫಲಿತಾಂಶ ಇನ್ನೂ ಗೊತ್ತಾಗಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.