ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭ್ಯರ ಆಟದ ಸುತ್ತ ಅಪರಾಧಗಳ ಹುತ್ತ...

Last Updated 29 ಜುಲೈ 2018, 19:30 IST
ಅಕ್ಷರ ಗಾತ್ರ

ಸಭ್ಯರ ಆಟ ಕ್ರಿಕೆಟ್‌ನ ಅಭಿಮಾನಿಗಳು ಮತ್ತೊಮ್ಮೆ ತಲೆತಗ್ಗಿಸುವಂತೆ ಮಾಡುವ ಪ್ರಕರಣ ನಡೆದಿದೆ. ಶ್ರೀಲಂಕಾದ ಧನುಷ್ಕಾ ಗುಣತಿಲಕ ಅವರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಲಂಕಾದ ಕೆಲವು ಆಟಗಾರರು ಉದ್ದೀಪನ ಮದ್ದು ಸೇವನೆ ಪ್ರಕರಣಗಳಲ್ಲಿ ಸಿಕ್ಕಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಸನತ್ ಜಯಸೂರ್ಯ, ಮಹೇಲ ಜಯವರ್ಧನೆ, ದಿಲ್ಶಾನ್ ತಿಲಕರತ್ನೆ, ಮುತ್ತಯ್ಯ ಮುರಳೀಧರನ್, ಚಮಿಂಡಾ ವಾಸ್ ಅವರಂತಹ ಶ್ರೇಷ್ಠ ಆಟಗಾರರುನಿವೃತ್ತಿಯಾದ ನಂತರ ಯಶಸ್ಸಿನ ಹಳಿಗೆ ಮರಳಲು ಲಂಕಾ ತಂಡವು ಪರದಾಡುತ್ತಿದೆ. ಲಂಕಾ ಕ್ರಿಕೆಟ್‌ಗೆ ಈ ಪ್ರಕರಣಗಳು ನುಂಗಲಾರದ ತುತ್ತಾಗಿವೆ. ಇದು ದೇಶದಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ಹಿನ್ನಡೆಯಾಗಲು ಕಾರಣವಾಗಿದೆ.

ಶ್ರೀಲಂಕಾ ಅಷ್ಟೇ ಅಲ್ಲ. ಆಸ್ಟ್ರೇಲಿಯಾ ಕೂಡ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತೀರಾ ಇತ್ತೀಚೆಗಷ್ಟೇ ಚೆಂಡು ವಿರೂಪಗೊಳಿಸಿದ್ದ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ಡೇವಿಡ್‌ ವಾರ್ನರ್ ಮತ್ತು ಬ್ಯಾಂಕ್ರಾಫ್ಟ್‌ ಅವರು ನಿಷೇಧಕ್ಕೊಳಗಾಗಿದ್ದರು. ಸ್ಮಿತ್ ನಾಯಕ ಪಟ್ಟವನ್ನೂ ಕಳೆದುಕೊಂಡಿದ್ದರು. ಈ ಘಟನೆ ಮರೆಯುವ ಮುನ್ನವೇ ಶ್ರೀಲಂಕಾದ ಘಟನೆ ಸುದ್ದಿಯಾಗಿದೆ. ಇದು ಕ್ರಿಕೆಟ್‌ ವಲಯದಲ್ಲಿ ತಲ್ಲಣ ಮೂಡಿಸಿದೆ.

ಕ್ರಿಕೆಟ್ ಇವತ್ತು ಆರ್ಥಿಕವಾಗಿ ಬಹಳ ಎತ್ತರಕ್ಕೆ ಬೆಳೆದಿದೆ.ಅಮೆರಿಕ, ಯುರೋಪ್‌ನಲ್ಲಿಯೂ ಕ್ರಿಕೆಟ್ ಬೆಳೆಸುವಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ಆದರೆ, ಭ್ರಷ್ಟಾಚಾರ,ಲೈಂಗಿಕ ಕಿರುಕುಳ ಮತ್ತು ಉದ್ದೀಪನ ಮದ್ದುಗಳ ಸೇವನೆಯ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದು ಇಂದು ನಿನ್ನೆಯ ಕಥೆಯಲ್ಲ. ಕಳೆದ ಎರಡೂವರೆ ದಶಕಗಳಲ್ಲಿ ದೊಡ್ಡಘಟನೆಗಳು ನಡೆದಿವೆ. ಇದಕ್ಕೆ ಕಡಿವಾಣ ಹಾಕುವ ಪ್ರಯತ್ನಗಳೂ ನಡೆದಿವೆ.

1. ಲಲಿತ್‌ ಮೋದಿ ಮತ್ತು ಐಪಿಎಲ್‌ ಭ್ರಷ್ಟಾಚಾರ
ಏಕದಿನ ಹಾಗೂ ಟೆಸ್ಟ್‌ ಸರಣಿಗಳಿಗೆ ಮಾತ್ರ ಸೀಮಿತವಾಗಿದ್ದ ಕ್ರಿಕೆಟ್‌ಗೆ ಹೊಸ ಸ್ಪರ್ಶ ನೀಡಿದ್ದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌). ಪಾಶ್ವಿಮಾತ್ಯ ಜಗತ್ತಿನಲ್ಲಿನ ಫುಟ್‌ಬಾಲ್‌ ಕ್ಲಬ್‌ಗಳ ಮಾದರಿಯಲ್ಲಿ ಭಾರತದಲ್ಲಿಯೂ ಕ್ರಿಕೆಟ್‌ನ ವ್ಯಾಪ್ತಿಯನ್ನು ಐಪಿಎಲ್‌ ಹಿಗ್ಗಿಸಿತು. ಇಂತಹ ಒಂದು ಟೂರ್ನಿಯು ಬೆಳೆಯಲು ಪ್ರಮುಖ ಕಾರಣ ಲಲಿತ್‌ ಮೋದಿ. ಮೂಲತಃ ಉದ್ದಮಿಯಾಗಿದ್ದ ಇವರು, ಕೆಲಕಾಲ ಭಾರತೀಯ ಕ್ರಿಕೆಟ್‌ ಮಂಡಳಿಯ (ಬಿಸಿಸಿಐ) ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಐಪಿಎಲ್‌ ಲೀಗ್‌ನ ಮೊದಲ ಮುಖ್ಯಸ್ಥರಾಗಿದ್ದ ಲಲಿತ್‌, ಮೂರು ವರ್ಷಗಳ ಕಾಲ (2008–10) ಅದೇ ಸ್ಥಾನದಲ್ಲಿ ಕೆಲಸ ಮಾಡಿದ್ದರು. ಆದರೆ, 2010ರ ನಂತರ ಈ ಜನಪ್ರಿಯ ಲೀಗ್‌ನ ಕರಾಳ ಮುಖವು ಜಗತ್ತಿಗೆ ಅನಾವರಣಗೊಂಡಿತ್ತು. ಫ್ರಾಂಚೈಸ್‌ಗಳ ಬಿಡ್ಡಿಂಗ್‌ನಿಂದ ಹಿಡಿದು, ಪಟ್ಟಭದ್ರ ಹಿತಾಸಕ್ತಿಗಳ ಪ್ರಾಬಲ್ಯ, ಎಣಿಕೆಗೂ ಮೀರಿದ ಅಕ್ರಮಗಳು ಇದರಲ್ಲಿ ತಾಂಡವವಾಡುತ್ತಿವೆ ಎಂಬ ಆರೋಪಗಳು ಕೇಳಿಬಂದವು. ಈ ಆರೋಪದ ಕೇಂದ್ರಬಿಂದುವಾದವರು ಲಲಿತ್‌ ಮೋದಿ.

ತನ್ನ ಅನುಮತಿ ಇಲ್ಲದೇ ಐಪಿಎಲ್‌ನ ಮಾಧ್ಯಮ ಹಾಗೂ ಅಂತರ್ಜಾಲದ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆಹಾಗೂ ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಅಕ್ರಮಗಳನ್ನು ನಡೆಸಿದ್ದಾರೆ ಎಂದು ಬಿಸಿಸಿಐ ಲಲಿತ್‌ ಅವರನ್ನುಉಚ್ಚಾಟನೆ ಮಾಡಿತು. 2013ರಲ್ಲಿ ಇವರ ಮೇಲೆ ನಿಷೇಧವನ್ನೂ ಹೇರಿತು. ಮುಂದೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಲಾಯವು (ಇ. ಡಿ) ತನಿಖೆ ಆರಂಭಿಸಿತು. ಇದೇ ವೇಳೆ ತನಿಖೆ ತಪ್ಪಿಸಿಕೊಳ್ಳುವ ಸಲುವಾಗಿ ಲಂಡನ್‌ಗೆ ಪರಾರಿಯಾದ ಲಲಿತ್‌, ಭಾರತಕ್ಕೆ ವಾಪಸ್‌ ಬರಲಿಲ್ಲ.

2. ಮ್ಯಾಚ್‌ ಫಿಕ್ಸಿಂಗ್‌
ಕ್ರಿಕೆಟ್‌ ಜಗತ್ತನ್ನು ತಲ್ಲಣಗೊಳಿಸಿದ ಪ್ರಮುಖ ಪ್ರಕರಣಮ್ಯಾಚ್‌ ಫಿಕ್ಸಿಂಗ್. ಭಾರತದ ಮೊಹಮ್ಮದ್‌ ಅಜರುದ್ದೀನ್‌ ಅವರಿಂದ ಹಿಡಿದುಕೀನ್ಯಾದ ಮೌರಿಸ್‌ ಒಡುಂಬೆವರೆಗೂ ಈ ಪ್ರಕರಣದ ಕಬಂಧ ಬಾಹುವಿನಲ್ಲಿ ಸಿಕ್ಕಿಹಾಕಿಕೊಂಡ ಅನೇಕ ಆಟಗಾರರಿದ್ದಾರೆ. ಗುಟ್ಟಾಗಿ ಕೋಟ್ಯಂತರ ರೂಪಾಯಿ ಹಣ ಪಡೆದು, ಜೂಜುಕೋರರಿಗೆ ಅನುಕೂಲವಾಗುವಂತೆ ಆಟವಾಡುತ್ತಿದ್ದ ಬಹಳಷ್ಟು ಮಂದಿ ‘ಸಭ್ಯರ ಆಟ’ ಎಂದೇ ಖ್ಯಾತವಾಗಿದ್ದ ಈ ಕ್ರೀಡೆಗೆ ಮಸಿ ಬಳಿದಿದ್ದಾರೆ.

ಮೊಹಮ್ಮದ್‌ ಅಜರುದ್ದೀನ್‌, 1990ರ ದಶಕದಲ್ಲಿ ಭಾರತತಂಡದ ನಾಯಕರಾಗಿದ್ದವರು. ಈ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದ್ದು 2000ನೇ ಇಸವಿಯಲ್ಲಿ. ಇದೇ‍ಪ್ರಕರಣದ ವಿಚಾರಣೆಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಹ್ಯಾನ್ಸಿ ಕ್ರೋನಿಯೆ ಅವರು ಭಾರತದ ಆಟಗಾರನ ಹೆಸರು ಬಹಿರಂಗಪಡಿಸಿದ್ದರು. ಬುಕ್ಕಿಗಳಿಗೆ ತಮ್ಮನ್ನು ಪರಿಚಯಿಸಿದ್ದೇ ಅಜರ್‌ ಎಂದು ಹ್ಯಾನ್ಸಿ ತಪ್ಪೊಪ್ಪಿಕೊಂಡಿದ್ದರು. ನಂತರ ಐಸಿಸಿ ಹಾಗೂ ಬಿಸಿಸಿಐ ಈ ಪ್ರತಿಭಾಶಾಲಿ ಬ್ಯಾಟ್ಸ್‌ಮನ್‌ ಮೇಲೆ ನಿಷೇಧ ಹೇರಿತ್ತು. ಇದೇ ವೇಳೆ ಭಾರತದರೇ ಆದ ಅಜಯ್‌ ಜಡೇಜಾ, ಮನೋಜ್‌ಪ್ರಭಾಕರ್‌, ಅಜಯ್‌ ಶರ್ಮಾ ಅವರು ಈ ಫಿಕ್ಸಿಂಗ್‌ನ ಕೂಪದಲ್ಲಿ ಬಿದ್ದಿದ್ದರು.

2010ರಲ್ಲಿ ಪಾಕಿಸ್ತಾನದ ಸಲ್ಮಾನ್‌ ಬಟ್‌, ಮೊಹಮ್ಮದ್‌ಆಸೀಫ್‌ ಹಾಗೂ ಮೊಹಮ್ಮದ್‌ ಅಮೀರ್‌ ಅವರು ಇದರಲ್ಲಿ ಸಿಕ್ಕಿಹಾಕಿಕೊಂಡು ಜೈಲು ಸೇರಿದ್ದರು.ಈ ವಿವಾದದಲ್ಲಿ ಅಪರಾಧಿಗಳಾಗಿ ಸಾರ್ವಜನಿಕ ವಲಯದಲ್ಲಿ ಟೀಕೆಗೊಳಗಾದವರ ಪಟ್ಟಿಯಲ್ಲಿ ವೆಸ್ಟ್‌ಇಂಡೀಸ್‌ನ ಮರ್ಲಾನ್‌ ಸ್ಯಾಮುಯಲ್ಸ್‌,ಕೀನ್ಯಾದ ಮೌರಿಸ್‌ ಒಡುಂಬೆ, ದಕ್ಷಿಣ ಆಫ್ರಿಕಾದ ಹರ್ಷಲ್‌ ಗಿಬ್ಸ್‌ ಸೇರಿದಂತೆ ಇನ್ನೂ ಮುಂತಾವದರಿದ್ದಾರೆ.

3. ಸ್ಪಾಟ್‌ ಫಿಕ್ಸಿಂಗ್‌ ಮತ್ತು ಐಪಿಎಲ್‌
ಐಪಿಎಲ್‌ನ ಬಗ್ಗೆ ಅಭಿಮಾನಿಗಳಲ್ಲಿ ರೇಜಿಗೆ ಹುಟ್ಟಿಸಿದಇನ್ನೊಂದು ಪ್ರಕರಣ ‘ಸ್ಪಾಟ್‌ ಫಿಕ್ಸಿಂಗ್‌’. 2013ರ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಈ ಹಗರಣದಲ್ಲಿ ಸಿಕ್ಕಿಬಿದ್ದವು. ಎರಡೂ ತಂಡಗಳಿಗೆ ಎರಡು ವರ್ಷಗಳ ನಿಷೇಧ ಹೇರಲಾಗಿತ್ತು. ರಾಜಸ್ಥಾನ್‌ ರಾಯಲ್ಸ್‌ತಂಡದ ಎಸ್‌. ಶ್ರೀಶಾಂತ್‌, ಅಜಿತ್‌ ಚಾಂಡಿಲಾ ಹಾಗೂ ಆಂಕಿತ್‌ ಚೌಹಾಣ್‌ ಸೇರಿದಂತೆ 36 ಮಂದಿಯ ಮೇಲೆ ಈ ಆರೋಪ ಹೊರಿಸಲಾಗಿತ್ತು. 2015ರಲ್ಲಿ ಈ ಮೂವರನ್ನು ನ್ಯಾಯಾಲಯವು ಆರೋಪಮುಕ್ತಗೊಳಿಸಿತ್ತು. ಆದರೆ, ಬಿಸಿಸಿಐ ಈ ಆಟಗಾರರ ಮೇಲೆ ಹೇರಿದ್ದ ಆಜೀವ ನಿಷೇಧವನ್ನು ತೆಗೆದುಹಾಕಿಲ್ಲ.

ಈ ಹಗರಣದ ಆಳ–ಅಗಲಗಳ ಬಗ್ಗೆ ಹಲವುತನಿಖಾ ವರದಿಗಳು ಹೊರಬಂದವು. ತನಿಖೆಗಳುನಡೆದವು.

4. ಮಖಾಯ ಎಂಟಿನಿ

ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಮಖಾಯ ಎಂಟಿನಿಅವರು 1998ರಲ್ಲಿ ಅತ್ಯಾಚಾರ ಪ್ರಕರಣದಲ್ಲಿಸಿಕ್ಕಿಹಾಕಿಕೊಂಡಿದ್ದರು. ಪೂರ್ವ ಲಂಡನ್‌ನ ಮಹಿಳೆಯೊಬ್ಬರು ಇವರ ಮೇಲೆ ಆರೋಪ ಹೊರಿಸಿದ್ದರು. ನಂತರ ಈ ವೇಗದ ಬೌಲರ್ ಬಂಧನಕ್ಕೊಳಗಾಗಿದ್ದರು. ಇಡೀ ಕ್ರಿಕೆಟ್‌ ರಂಗ ಈ ಪ್ರಕರಣದಿಂದ ಬೆಚ್ಚಿ ಬಿದ್ದಿತ್ತು. ಕಪ್ಪು ವರ್ಣೀಯ ಆಟಗಾರನನ್ನು ಇದರಲ್ಲಿ ಸಿಲುಕಿಸಲಾಗಿದೆ ಎಂದು ಜನಾಂಗೀಯ ವಿರೋಧಿ ಚಳವಳಿಯ ಹೋರಾಟಗಾರರು ಆರೋಪಿಸಿದ್ದರು. ಸೂಕ್ತ ಸಾಕ್ಷ್ಯಾಧಾರ ಸಿಗದಕಾರಣ ಮಖಾಯ ಅವರನ್ನು ಖುಲಾಸೆ ಮಾಡಲಾಗಿತ್ತು.ಆಗ, ನ್ಯಾಯಾಲಯದ ಹೊರಗೆ ಈ ಆಟಗಾರನ ಅಭಿಮಾನಿಗಳು ಸಂಭ್ರಮಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಈ ವಿವಾದದ ನಂತರ ಎಂಟಿನಿ ಜಗತ್ತಿನ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿ ಮಿಂಚಿದರು.

5. ಶೇನ್‌ ವಾರ್ನ್‌
ಕ್ರಿಕೆಟ್‌ ಅಂಗಳದಲ್ಲಷ್ಟೇ ಅಲ್ಲದೆ ಕ್ರೀಡಾಂಗಣದ ಹೊರಗಡೆಯೂ ಸಾಕಷ್ಟು ಸುದ್ದಿಯಾದವರು ಆಸ್ಟ್ರೇಲಿಯಾದ ಶೇನ್‌ ವಾರ್ನ್‌. ಶ್ರೇಷ್ಠ ಲೆಗ್‌ ಸ್ಪಿನ್ನರ್‌ ವಾರ್ನ್‌, ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು.ಈ ಆಟಗಾರ
ಅನೇಕ ಮಹಿಳೆಯರೊಂದಿಗೆ ಅನುಚಿತ ವರ್ತನೆಯ ಪ್ರಕರಣಗಳಲ್ಲಿ ಹಲವು ಬಾರಿ ಸಿಕ್ಕಿಹಾಕಿಕೊಂಡಿದ್ದರು. ಜೊತೆಗೆ, ಅಂಗಳದಲ್ಲಿ ಎದುರಾಳಿ ತಂಡದ ಆಟಗಾರರ ಮೇಲೆ ದೈಹಿಕ ಹಲ್ಲೆ ನಡೆಸುವುದಲ್ಲಿಯೂ ಇವರು ಮುಂದು. ಈ ಆಟಗಾರ ಉದ್ದೀಪನ ಮದ್ದು ಸೇವಿಸಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು.

6. ಬಾಬ್‌ ವುಲ್ಮರ್‌
2007ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್‌ ಹಲವು ಕುಖ್ಯಾತ ಕಾರಣಗಳಿಗೆ ಸುದ್ದಿಯಾಗಿತ್ತು. ಈ ಟೂರ್ನಿಯ ನಂತರ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿಯು ದಿವಾಳಿಯಾಯಿತು. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಟೂರ್ನಿಯ ಲೀಗ್‌ ಹಂತದಲ್ಲೇ ಹೊರಬಿದ್ದಿದ್ದವು. ಮುಖ್ಯವಾಗಿ ಆಗಿನಪಾಕಿಸ್ತಾನ ತಂಡದ ಕೋಚ್‌ ಆಗಿದ್ದ ಬಾಬ್‌ ವುಲ್ಮರ್‌ ಅವರ ಅಸಹಜ ಸಾವು ಕ್ರೀಡಾ ಜಗತ್ತಿಗೆ ಆಘಾತ ಉಂಟುಮಾಡಿತ್ತು.

ಐರ್ಲೆಂಡ್‌ ವಿರುದ್ಧ ಪಾಕಿಸ್ತಾನ ತಂಡ ಸೋತಿತ್ತು. ಪಂದ್ಯ ನಡೆದ ಹಲವು ಗಂಟೆಗಳ ನಂತರ ಬಾಬ್‌, ಜಮೈಕಾದ ತಮ್ಮ ಕೋಣೆಯಲ್ಲಿ ಮೃತಪಟ್ಟಿದ್ದರು. ಕೂಡಲೇ ಇದನ್ನು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿದ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದರು. ಮರಣೋತ್ತರ ಪರೀಕ್ಷೆಯ ವರದಿ ಬರುವ ಮುನ್ನ ಮಾಧ್ಯಮಗಳಲ್ಲಿತರಹೇವಾರಿ ಕತೆಗಳು ಹುಟ್ಟಿಕೊಂಡಿದ್ದವು. ತಂಡದಆಟಗಾರರ ಮೇಲೆ ಅನುಮಾನಗಳೆದ್ದವು. ಬಾಬ್‌ ಸಹಜ ಸಾವಿಗೀಡಾಗಿದ್ದರು ಎಂದು ಮೂರು ತಿಂಗಳ ನಂತರ ಪೊಲೀಸರು ಹೇಳಿದ್ದರು. ಆದರೆ, ವಿಚಾರಣೆ ನಡೆಸಿದ ಅಲ್ಲಿನ ನ್ಯಾಯಾಲಯ ಪೀಠವು ಸಾಕ್ಷ್ಯಾಧಾರಗಳ ಕೊರೆತೆಯಿಂದ ಈ ಪ್ರಕರಣದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ.

ಧನುಷ್ಕಾ ಗುಣತಿಲಕಮತ್ತು ಅತ್ಯಾಚಾರ ಪ್ರಕರಣ
ಇತ್ತೀಚೆಗೆ ಶ್ರೀಲಂಕಾ ತಂಡದ ಬ್ಯಾಟ್ಸ್‌ಮನ್‌ ಧನುಷ್ಕಾ ಗುಣತಿಲಕ ಅವರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಪಂದ್ಯಕ್ಕಾಗಿ ಕೊಲಂಬೊದ ಹೋಟೆಲ್‌ನಲ್ಲಿ ಶ್ರೀಲಂಕಾ ತಂಡದ ಆಟಗಾರರು ತಂಗಿದ್ದರು. ರಾತ್ರಿ ವೇಳೆ ಧನುಷ್ಕಾ ಹಾಗೂ ಅವರ ಆಪ್ತ ಸ್ನೇಹಿತನೊಬ್ಬ ನಾರ್ವೆಯ ಇಬ್ಬರು ಮಹಿಳೆಯರನ್ನು ತಾವು ತಂಗಿದ್ದ ಕೋಣೆಗೆ ಕರೆಸಿಕೊಂಡಿದ್ದರು. ನಂತರ ಅವರಲ್ಲಿದ್ದ ಒಬ್ಬ ಮಹಿಳೆಯು ಈ ಆಟಗಾರನ ಆಪ್ತ ಸ್ನೇಹಿತನ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದರು. ವಿವಾದ ಭುಗಿಲೇಳುತ್ತಿದ್ದಂತೆ ‘ಅನುಚಿತ ವರ್ತನೆ ತೋರಿದ’ ಆಧಾರದ ಮೇಲೆ ಇವರನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ಅಮಾನತು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT