ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿರಲಿಲ್ಲ.
ಪಂದ್ಯದ ಅತ್ಯಂತ ನಿರ್ಣಾಯಕ ಹಂತದಲ್ಲೂ ಹಾರ್ದಿಕ್ ಅವರಿಗೆ ನಾಯಕ ರೋಹಿತ್ ಶರ್ಮಾ ಚೆಂಡು ನೀಡಲಿಲ್ಲ. ಓರ್ವ ಪರಿಪೂರ್ಣ ಬ್ಯಾಟ್ಸ್ಮನ್ ರೂಪದಲ್ಲಿ ಮಾತ್ರ ಹಾರ್ದಿಕ್ ಅವರನ್ನು ಪರಿಗಣಿಸಲಾಗಿತ್ತು. ಇದು ಅಭಿಮಾನಿಗಳಲ್ಲೂ ಗೊಂದಲಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಹಾಗೂ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ಸಂಪೂರ್ಣ ಪ್ಯಾಕೇಜ್ ರೂಪದಲ್ಲಿ ಹಾರ್ದಿಕ್ ಪಾಂಡ್ಯ ಎಷ್ಟು ಮೌಲ್ಯಯುತ ಆಟಗಾರ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಹಿಂದಿನ ಪಂದ್ಯದ (ಆರ್ಸಿಬಿ ವಿರುದ್ಧ) ವಿಚಾರಕ್ಕೆ ಬಂದಾಗ ಕೆಲಸದೊತ್ತಡದ ನಿರ್ವಹಣೆಯು ಪ್ರಮುಖ ವಿಷಯವೆನಿಸಿತ್ತು. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಸರಣಿಯುದ್ಧಕ್ಕೂ ಪಾಂಡ್ಯ ಬೌಲಿಂಗ್ ಮಾಡಿದ್ದರು. ಕೊನೆಯ ಏಕದಿನದಲ್ಲೂ ಒಂಬತ್ತು ಓವರ್ಗಳನ್ನು ಎಸೆದಿದ್ದರು. ಹಾಗಾಗಿ ಫಿಸಿಯೊ ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಜಹೀರ್ ವಿವರಿಸಿದ್ದಾರೆ.
ಈಗಲೂ ಹಾರ್ದಿಕ್ ಭುಜ ನೋವಿನ ಬಗ್ಗೆ ಸ್ವಲ್ಪ ಕಳವಳವಿದೆ. ಆದರೆ ಆತಂಕಕಾರಿ ವಿಚಾರವಲ್ಲ. ಶೀಘ್ರದಲ್ಲೇ ಅವರು ಬೌಲಿಂಗ್ ಮಾಡುವುದನ್ನು ನೀವು ನೋಡಲಿದ್ದೀರಿ. ಈ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಜಹೀರ್ ಖಾನ್ ಹೇಳಿದ್ದಾರೆ.
ವೆಸ್ಟ್ಇಂಡೀಸ್ನ ಅನುಭವಿ ಆಲ್ರೌಂಡರ್ ಕೀರಾನ್ ಪೊಲಾರ್ಡ್, ಮುಂಬೈ ತಂಡದ ಆರನೇ ಬೌಲಿಂಗ್ ಆಯ್ಕೆಯಾಗಿದ್ದಾರೆ ಎಂದು ಜಹೀರ್ ಖಾನ್ ಸ್ಪಷ್ಟಪಡಿಸಿದರು. ಹಾಗಾಗಿ ಬೌಲಿಂಗ್ ವಿಭಾಗದಲ್ಲಿ ನಮಗೆ ಚಿಂತೆಯಿಲ್ಲ. ಈ ಬಾರಿಯ ಐಪಿಎಲ್ ಸಂಪೂರ್ಣ ಭಿನ್ನವಾಗಿದೆ. ಹಾಗಾಗಿ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಆಡಬೇಕಿದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.