ಮೇಲ್ಬರ್ನ್:ಕ್ರೀಡಾಂಗಣದಲ್ಲಿ ಕುಳಿತುಪಂದ್ಯ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ನೀಡದೆ ಖಾಲಿ ಸ್ಟೇಡಿಯಂಗಳಲ್ಲಿಯೇ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು ನಡೆಸುವ ಯೋಜನೆಯನ್ನು ನನ್ನಿಂದ ಊಹಿಸಲೂ ಸಾಧ್ಯವಾಗುತ್ತಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಅಲನ್ ಬಾರ್ಡರ್ ಹೇಳಿದ್ದಾರೆ.
ಜಾಗತಿಕ ಪಿಡಗು ಕೋವಿಡ್–19 ಸೋಂಕು ಭೀತಿ ಸದ್ಯ ಎಲ್ಲೆಡೆ ಆವರಿಸಿದೆ. ಪ್ರಪಂಚದಾದ್ಯಂತ ಹಲವು ದೇಶಗಳು ವಿದೇಶ ಪ್ರಯಾಣಕ್ಕೆ ನಿರ್ಬಂಧ ಹೇರಿ, ಲಾಕ್ಡೌನ್ ಘೋಷಿಸಿವೆ.
ಆಸ್ಟ್ರೇಲಿಯಾದಲ್ಲಿ ಇದುವರೆಗೆ ಸುಮಾರು 6.5 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, 61 ಜನರು ಮೃತಪಟ್ಟಿದ್ದಾರೆ. ಹೀಗಾಗಿ ಕಾಂಗರೂ ನೆಲದಲ್ಲಿ ಈ ವರ್ಷ ಅಕ್ಟೋಬರ್ನಲ್ಲಿ ಆರಂಭವಾಗಬೇಕಿರುವ ಟಿ20 ವಿಶ್ವಕಪ್ ಟೂರ್ನಿಯು ನಿಗದಿಯಂತೆ ನಡೆಯುವುದು ಅನುಮಾನವಾಗಿದೆ.
ಇದೇ ವೇಳೆ ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸುವ ಬಗ್ಗೆ ಚರ್ಚೆ ಆರಂಭವಾಗಿವೆ. ಅದಕ್ಕೆ ಹಲವರು ಸಹಮತವವ್ಯಕ್ತಪಡಿಸಿದ್ದಾರೆ. ಆದರೆ, ಅಲನ್ ಬಾರ್ಡರ್ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ:ಟಿ20 ವಿಶ್ವಕಪ್ ಮೇಲೂ ಕೊರೊನಾ ತೂಗುಗತ್ತಿ?
1987ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕರಾದ 64 ವರ್ಷದ ಅಲನ್, ‘ಖಾಲಿ ಸ್ಟೇಡಿಯಂನಲ್ಲಿ ಆಡುವುದನ್ನು ನನ್ನಿಂದ ಊಹಿಸಲೂ ಸಾಧ್ಯವಾಗುತ್ತಿಲ್ಲ..’ ಎಂದು ಹೇಳಿದ್ದಾರೆ.
‘ತಂಡ, ಸಹಾಯಕ ಸಿಬ್ಬಂದಿ ಮತ್ತು ಸಂಬಂಧಿಸಿದ ಎಲ್ಲರೂ ದೇಶದ ಉದ್ದಗಲಕ್ಕೂ ಸಂಚರಿಸಿ ಕ್ರಿಕೆಟ್ ಆಡಬಹುದು. ಆದರೆ, ಅಭಿಮಾನಿಗಳನ್ನುಕ್ರೀಡಾಂಗಣಕ್ಕೆ ಬಿಡುವುದಿಲ್ಲ. ಈ ರೀತಿ ಆಗುವುದನ್ನು ನಾನು ನೋಡುವುದಿಲ್ಲ’ ಎಂದು ಕಿಡಿಕಾರಿದ್ದಾರೆ.
ಮುಂದುವರಿದು, ‘ವಿಶ್ವಕಪ್ ಟೂರ್ನಿ ಆರಂಭವಾಗುವ ಹೊತ್ತಿಗೆ ಕೋವಿಡ್–19 ಪಿಡುಗು ದೂರವಾಗಿರುತ್ತದೆ. ಅದಾದ ನಂತರ ಜನರು ತಮ್ಮತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಹಾಗಾಗಿ ಆ ವೇಳೆ ವಿಶ್ವಕಪ್ ಆಯೋಜಿಸುವ ಬದಲು, ಟೂರ್ನಿಯನ್ನು ರದ್ದುಗೊಳಿಸಿ ಬೇರೆ ಇನ್ನೆಲ್ಲಿಯಾದರೂ ನಡೆಸಲು ಪ್ರಯತ್ನಿಸಿ’ ಎಂದು ಸಲಹೆ ನೀಡಿದ್ದಾರೆ.
ಆಸಿಸ್ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಅವರೂ ಕಳೆದವಾರ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದರು
‘ಕ್ರೀಡಾಂಗಣದಲ್ಲಿ ಜನರಿಲ್ಲದೆ ವಿಶ್ವಕಪ್ನಲ್ಲಿ ಆಡಬೇಕು ಎಂಬುದನ್ನು ಜೀರ್ಣಿಸಿಕೊಳ್ಳುವುದು ಕಷ್ಟದ ಕೆಲಸ. ಹಾಗಾಗಿ ಭವಿಷ್ಯದಲ್ಲಿ ಆ ರೀತಿಯಾಗುವುದನ್ನು ನನ್ನಿಂದ ನೋಡಲಾಗದು’ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.