ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಆಸ್ಟ್ರೇಲಿಯಾ ಟಿ20 ಹಣಾಹಣಿ: ‘ಔಪಚಾರಿಕ‘ ಪಂದ್ಯಕ್ಕೆ ಅಣಿಯಾದ ಬೆಂಗಳೂರು

Published 2 ಡಿಸೆಂಬರ್ 2023, 19:30 IST
Last Updated 2 ಡಿಸೆಂಬರ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನನಗರಿಯ ಮುಸ್ಸಂಜೆಗಳಿಗೆ ಈಗ ಕಚಗುಳಿ ನೀಡುವ ಚಳಿ ಆವರಿಸುತ್ತಿದೆ. ಈ ಹೊತ್ತಿನಲ್ಲಿ ಹನಿಯುವ ಇಬ್ಬನಿಗೆ ಮೈಯೊಡ್ಡಿಕೊಂಡಿರುವ ಚಿನ್ನಸ್ವಾಮಿ ಕ್ರೀಡಾಂಗಣ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಪಂದ್ಯಕ್ಕೆ ಅಣಿಯಾಗಿದೆ.

ಭಾನುವಾರ ನಡೆಯಲಿರುವ ಈ ಪಂದ್ಯವು ಔಪಚಾರಿಕವಷ್ಟೇ ಅಲ್ಲ; ಬೆಂಗಳೂರು ಕ್ರಿಕೆಟ್‌ಪ್ರೇಮಿಗಳ ಪಾಲಿಗೆ ಅನಿರೀಕ್ಷಿತವೂ ಹೌದು. ಏಕೆಂದರೆ; ಐದು ಪಂದ್ಯಗಳ ಈ ಸರಣಿಯನ್ನು ಭಾರತವು ಈಗಾಗಲೇ 3–1ರಿಂದ ತನ್ನದಾಗಿಸಿಕೊಂಡಿದೆ. ಆದ್ದರಿಂದ ಕೊನೆಯ ಪಂದ್ಯದ ಫಲಿತಾಂಶಕ್ಕೆ ಅಷ್ಟೇನೂ ಮಹತ್ವ ಉಳಿದಿಲ್ಲ.

ಕ್ಲೀನ್‌ ಸ್ವೀಪ್ ಮಾಡಿಕೊಳ್ಳುವ ಅವಕಾಶವಿಲ್ಲದಿದ್ದರೂ ಗೆಲುವಿ ನೊಂದಿಗೆ ಸರಣಿಗೆ ಮುಕ್ತಾಯ ಹಾಡುವ ಆಸೆ ಆತಿಥೇಯರಿಗೆ ಇದೆ. ಕಳೆದ ಎರಡೂವರೆ ತಿಂಗಳುಗಳಿಂದ ಭಾರತದ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ತಂಡವೂ ಸಮಾಧಾನಕರ ಜಯದೊಂದಿಗೆ ಸ್ವದೇಶಕ್ಕೆ ಮರಳುವ ಛಲದಲ್ಲಿದೆ. ಈ ಸುದೀರ್ಘ ಅವಧಿಯಲ್ಲಿ ಕಾಂಗರೂ ನಾಡಿನ ಬಳಗವು ಭಾರತದ ಎದುರಿನ ಏಕದಿನ ಕ್ರಿಕೆಟ್ ಸರಣಿ ಸೋತಿತ್ತು. ಆದರೆ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತಕ್ಕೆ ಆಘಾತ ನೀಡಿ ಕಿರೀಟ ಧರಿಸಿತು.

ವಿಶ್ವಕಪ್ ಟೂರ್ನಿ ಮುಗಿದು ನಾಲ್ಕೇ ದಿನಕ್ಕೆ ಶುರುವಾದ ಸರಣಿಯ ಮೊದಲೆರಡು ಪಂದ್ಯದಲ್ಲಿ ಸೋತಿದ್ದ ಆಸ್ಟ್ರೇಲಿಯಾ, ಮೂರನೇ ಪಂದ್ಯದಲ್ಲಿ ಪುಟಿದೆದ್ದಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ ಅಮೋಘ ಶತಕ ಹೊಡೆದಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ ಅವರಿರಲಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ತಂಡದಲ್ಲಿದ್ದ ಟ್ರಾವಿಸ್ ಹೆಡ್ ಮತ್ತು ಜೋಶ್ ಇಂಗ್ಲಿಸ್ ಬಿಟ್ಟರೆ ಉಳಿದವರೆಲ್ಲರೂ ತಮ್ಮ ದೇಶಕ್ಕೆ ಮರಳಿದ್ದಾರೆ. ಆದ್ದರಿಂದ ಹೊಸಬರಿರುವ ಆಸ್ಟ್ರೇಲಿಯಾ ತಂಡದಲ್ಲಿ ಸಮತೋಲನವಿಲ್ಲ. ಹೆಡ್ ಮತ್ತು ನಾಯಕ ಮ್ಯಾಥ್ಯೂ ವೇಡ್ ಅವರ ಅನುಭವದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಇದೇ ಮೊದಲ ಬಾರಿ ನಾಯಕತ್ವ ವಹಿಸಿರುವ ಸೂರ್ಯಕುಮಾರ್ ಯಾದವ್ ಸರಣಿ ಗೆಲುವಿನ ಖುಷಿಯಲ್ಲಿದ್ದಾರೆ. ಆದರೆ ಒಂದು ಪಂದ್ಯ ಬಿಟ್ಟರೆ ಉಳಿದದ್ದರಲ್ಲಿ ಅವರ ಬ್ಯಾಟ್‌ನಿಂದ ಹೆಚ್ಚು ರನ್‌ಗಳು ಹರಿದಿಲ್ಲ. ಆದರೂ ಋತುರಾಜ್ ಗಾಯಕವಾಡ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ‘ಸಿಕ್ಸರ್ ಪರಿಣತ’ ರಿಂಕು ಸಿಂಗ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ದೀಪಕ್ ಚಾಹರ್ ಮರಳಿರುವುದರಿಂದ ಬೌಲಿಂಗ್ ವಿಭಾಗವೂ ಉತ್ತಮವಾಗಿದೆ. ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯಿ ಜೋಡಿಯು ಸ್ಪಿನ್ ಮೋಡಿ ಮೆರೆಯುತ್ತಿರುವುದು ಭರವಸೆ ಮೂಡಿಸಿದೆ.

ಇದೇ ತಿಂಗಳು ನಡೆಯಲಿರುವ ಐಪಿಎಲ್ ಮಿನಿ ಹರಾಜು ಪಟ್ಟಿಯಲ್ಲಿರುವ ಕೆಲವು ಆಟಗಾರರಿಗೆ ಈ ಪಂದ್ಯದಲ್ಲಿ ತಮ್ಮ ಭುಜಬಲ ಮೆರೆದು ಫ್ರ್ಯಾಂಚೈಸಿಗಳನ್ನು ಆಕರ್ಷಿಸುವ ಅವಕಾಶವಂತೂ ಇದೆ.

ಅನಿರೀಕ್ಷಿತ ಪಂದ್ಯ: ಬೆಂಗಳೂರಿನ ಪಾಲಿಗೆ ಇದು ಅನಿರೀಕ್ಷಿತ ಪಂದ್ಯ. ಪೂರ್ವನಿರ್ಧರಿತ ವೇಳಾಪಟ್ಟಿಯ ಪ್ರಕಾರ ಈ ಪಂದ್ಯವು ಹೈದರಾಬಾದ್‌ನಲ್ಲಿ ನಿಗದಿಯಾಗಿತ್ತು. ಆದರೆ, ತೆಲಂಗಾಣ ರಾಜ್ಯ ಚುನಾವಣೆಗಳ ಎಣಿಕೆಯು ಭಾನುವಾರ ನಡೆಯಲಿದೆ. ಆದ್ದರಿಂದ ಈ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಅಕ್ಟೋಬರ್–ನವೆಂಬರ್‌ನಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ನಡುವಣ ಪಂದ್ಯ ಸೇರಿದಂತೆ ವಿಶ್ವಕಪ್ ಟೂರ್ನಿಯ ಐದು ಪಂದ್ಯಗಳು ಇಲ್ಲಿ ನಡೆದಿದ್ದವು. ಆಗ ಕಂಡುಬಂದಿದ್ದ ಟಿಕೆಟ್ ಖರೀದಿಯ ನೂಕುನುಗ್ಗಲು ಇರಲಿಲ್ಲ.

‘ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಅವರು ಆಡುತ್ತಿಲ್ಲ. ಆಸ್ಟ್ರೇಲಿಯಾ ತಂಡದಲ್ಲಿರುವ ಆರ್‌ಸಿಬಿ ಆಟಗಾರ ಮ್ಯಾಕ್ಸ್‌ವೆಲ್ ಕೂಡ ಇಲ್ಲ. ಆದ್ದರಿಂದ ಪ್ರೇಕ್ಷಕರ ಸಂಖ್ಯೆ ತುಸು ಕಡಿಮೆಯಾಗಬಹದು. ಆದರೂ ಭಾನುವಾರ ರಜೆಯ ಮೋಜಿಗಾಗಿ ಕ್ರಿಕೆಟ್‌ ಪ್ರೇಮಿಗಳು ಧಾವಿಸುವುದು ಖಚಿತ’ ಎಂದು ಆಯೋಜಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಮೊದಲ ನಾಲ್ಕು ಪಂದ್ಯಗಳು ನಡೆದ ತಾಣಗಳಲ್ಲಿ ಪ್ರೇಕ್ಷಕರ ಗ್ಯಾಲರಿಗಳು ಭರ್ತಿಯಾಗಿದ್ದವು. ಚುಟುಕು ಕ್ರಿಕೆಟ್ ಆಕರ್ಷಣೆಗೆ ಬೆಂಗಳೂರಿಗರೂ ಮೈದಾನದತ್ತ ಮುಖ ಮಾಡಬಹುದು ಎಂಬ ವಿಶ್ವಾಸದಲ್ಲಿ ಆಯೋಜಕರಿದ್ದಾರೆ.

ಟೀಕೆ ಎದುರಿಸಿದ ಸರಣಿ

ವಿಶ್ವಕಪ್ ಟೂರ್ನಿ ಮುಗಿದ ನಾಲ್ಕೇ ದಿನಗಳಿಗೆ ಈ ಟಿ20 ಸರಣಿ ನಡೆಸಿದ್ದು ಕೆಲವು ದಿಗ್ಗಜ ಕ್ರಿಕೆಟಿಗರಿಂದ ಟೀಕೆಗೊಳಗಾಯಿತು. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕ್ ಹಸ್ಸಿ ಈಚೆಗೆ ಸರಣಿಯನ್ನು ಟೀಕಿಸಿದ್ದರು. ಕ್ಯಾಲೆಂಡರ್ ದಟ್ಟಣೆಯನ್ನೂ ಅವರು ಟೀಕೆ ಮಾಡಿದ್ದರು.

‘ಸರಣಿಯು ಮೌಲ್ಯ ಕಳೆದುಕೊಂಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಮಿಚೆಲ್‌ ಮಾರ್ಷ್‌ ಇದಕ್ಕೆ ದನಿಗೂಡಿಸಿದ್ದರು. ‘ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾದ ಎರಡು ತಂಡಗಳು ನಾಲ್ಕೇ ದಿನಗಳ ಅಂತರದಲ್ಲಿ ಮತ್ತೆ ಸರಣಿ ಆಡಲು ಕಣಕ್ಕಿಳಿಯುವುದು ವಿಚಿತ್ರ ಸಂಗತಿ. ವಿಶ್ವಮಟ್ಟದ ಟೂರ್ನಿಯಲ್ಲಿ ಆಡಿದ ನಂತರ ಆಟಗಾರರಿಗೆ ಕೆಲವು ದಿನಗಳಾದರೂ ವಿಶ್ರಾಂತಿ ನೀಡಬೇಕಲ್ಲವೇ? ಯಾರೇ ವಿಶ್ವಕಪ್ ಗೆಲ್ಲಲಿ ಅಥವಾ ಸೋಲಲಿ ಬಿಡುವು ಕೊಡುವುದು ಮುಖ್ಯ’ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಆಸ್ಟ್ರೇಲಿಯಾ ತಂಡವು  ಇದೇ 14ರಿಂದ ತವರಿನಲ್ಲಿ ಪಾಕಿಸ್ತಾನ ಎದುರು ಟೆಸ್ಟ್ ಸರಣಿ ಆಡಲಿದೆ. ಭಾರತ ತಂಡವೂ 10ರಿಂದ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT